ಕಾಶ್ಮೀರ ಕಣಿವೆಗೆ ನೂತನ ಮಹಾರಾಜ
ನವದಹಲಿ, ಡಿ. 31 : ನ್ಯಾಷನಲ್ ಕಾನ್ಫರೆನ್ಸ್ ನ ಅಧ್ಯಕ್ಷ ಹಾಗೂ ಕೇಂದ್ರದ ಮಾಜಿ ಸಚಿವ ಒಮರ್ ಅಬ್ದುಲ್ಲಾ ಅವರು ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ ಪಕ್ಷ ನ್ಯಾಷನಲ್ ಕಾನ್ಫರೆನ್ಸ್ ಗೆ ಬೆಂಬಲ ಸೂಚಿಸಿದ್ದು, ಸೋನಿಯಾ ಗಾಂಧಿ ಅವರು ಒಮರ್ ಅಬ್ದುಲ್ಲಾ ಅವರನ್ನು ಮುಖ್ಯಮಂತ್ರಿ ಪೀಠದಲ್ಲಿ ಕೂರಿಸಲು ಸಮ್ಮತಿಸಿದ್ದಾರೆ.
ಮಂಗಳವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಒಮರ್ ಅಬ್ದುಲ್ಲಾ ಸುದೀರ್ಘ ಮಾತುಕತೆ ನಂತರ ಉಭಯ ನಾಯಕರು ಮೈತ್ರಿ ಸರ್ಕಾರದ ವಿಷಯವನ್ನು ಪ್ರಕಟಿಸಿದರು. ಒಟ್ಟು 87 ಸದಸ್ಯ ಬಲದ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಯಾವ ಪಕ್ಷಗಳು ಬಹುಮತ ಪಡೆಯಲು ವಿಫಲವಾಗಿದ್ದವು. ಈ ಹಿನ್ನೆಲೆಯಲ್ಲಿ 28 ಸ್ಥಾನಗಳನ್ನು ಗಳಿಸಿ ಏಕೈಕ ದೊಡ್ಡ ಪಕ್ಷವಾಗಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ, 17 ಸ್ಥಾನಗಳಲ್ಲಿ ಜಯಗಳಿಸಿರುವ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಮುಂದಾಗಿದೆ. ಈ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡರೆ ಒಟ್ಟು 45 ಸದಸ್ಯ ಬಲ ಹೊಂದಿದಂತಾಗುತ್ತದೆ. ಇದು ಆಗತ್ಯ ಬಹುಮತಕ್ಕಿಂತ ಹೆಚ್ಚು ಸ್ಥಾನ ಆದಂತಾಗುವುದು.
(ಏಜೆನ್ಸೀಸ್)