ವಿಧವೆಯರ ಬೆಂಬಲಕ್ಕೆ ನಿಲ್ಲುವ ಮಂಡ್ಯ
ಬೆಂಗಳೂರು, ಡಿ. 30 : ಗಂಡುಗಲಿಗಳ ಜಿಲ್ಲೆ ಮಂಡ್ಯ. ಕಬ್ಬು ಭತ್ತದ ಕಣಜ ಮಂಡ್ಯ. ರಾಜಕೀಯ ಕಲಿಗಳ ರಣಭೂಮಿ ಮಂಡ್ಯ. ಮುದ್ದೆ ಬಸ್ಸಾರು, ಮುದ್ದೆ ಮಾಂಸದ ಸಾರನ್ನು ಹೀರಿಕೊಂಡು ಬೆಳೆದ ಮಂಡ್ಯ. ಭೂಮಿ ವ್ಯಾಜ್ಯಗಳಿಗೆ ಹೆಸರಾದ ಮಂಡ್ಯ. ಟ್ರ್ಯಾಕ್ಟರ್ ನಲ್ಲಿ ಮನೆಮಂದಿಯನ್ನು ತುಂಬಿಕೊಂಡು ಪೇಟೆ ಸುತ್ತುವ ರೈತರ ಮಂಡ್ಯ. ರೈತ ಚಳವಳಿಯ ನೆಲೆವೀಡಾಗಿದ್ದ ಮಂಡ್ಯ. ವಿಧವೆಯರನ್ನು ಉಪಚುನಾವಣೆಗಳಲ್ಲಿ ಎಂದೂ ಕೈಬಿಡದ ಮಂಡ್ಯ.
ಒಬ್ಬ ಶಾಸಕ ತೀರಿಕೊಂಡಾಗಲೋ ಅಥವಾ ರಾಜೀನಾಮೆ ನೀಡಿದಾಗಲೋ ತೆರವಾಗುವ ಸ್ಥಾನಕ್ಕೆ ಜರುಗುವ ಉಪಚುನಾವಣೆಯಲ್ಲಿ ಶಾಸಕರ ಪತ್ನಿಯರು ಕಣಕ್ಕೆ ಧುಮುಕುವುದು ಸಾಮಾನ್ಯ. ಆದರೆ ಮಂಡ್ಯ ಜಿಲ್ಲೆಯಲ್ಲಿ ಈ ಚಾಳಿಗೆ ದೀರ್ಘ ಪರಂಪರೆ ಇದೆ. ಇದುವರೆವಿಗೆ ನಡೆದ ನಾನಾ ಉಪಚುನಾವಣೆಗಳಲ್ಲಿ ಒಟ್ಟು 9 ಮಂದಿ ವಿಧವೆಯರನ್ನು ವಿಧಾನಸೌಧಕ್ಕೆ ಕಳಿಸಿದ ಕೀರ್ತಿ ಮಂಡ್ ಜಿಲ್ಲೆಯದು.
ಸಿದ್ದರಾಜು ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಅಂತೂ ಮದ್ದೂರಿನ ಮತದಾರರು ಕಲ್ಪನಾ ಸಿದ್ದರಾಜು ಅವರ ಕೈಬಿಡಲಿಲ್ಲ. ಅನುಕಂಪದ ಅಲೆಯಲ್ಲಿ ತೇಲುತ್ತಿದ್ದ ಅವರ ಜನಪ್ರಿಯತೆಯ ತೇರಿಗೆ ಅಡ್ಡಹಾಕಲು ಬಿಜೆಪಿ ಕಾಂಗ್ರೆಸ್ ನಡೆಸಿದ ಯಾವ ಪಟ್ಟುಗಳೂ ಕೈಗೂಡಲಿಲ್ಲ. ಮದ್ದೂರಿನ ರಾಜ ಎಸ್.ಎಂ. ಕೃಷ್ಣ ಅವರ ಅಣ್ಣನ ಮಗ ಗುರುಚರಣ ಮತ್ತು ಶತಕೋಟಿ ರೂಪಾಯಿಗಳ ಧಣಿ ತಮ್ಮಣ್ಣನ ದೊಡ್ಡಾಟಗಳು ಇಲ್ಲಿ ನಡೆಯಲಿಲ್ಲ. ತಮ್ಮಣ್ಣನನ್ನು ಸೋಲಿಸಿ ಮದ್ದೂರು ವಡೆಯನ್ನು ತಮ್ಮದಾಗಿಸಿಕೊಂಡ ಕಲ್ಪನಾ ಸಿದ್ದರಾಜು ಅವರಿಗೆ ಶುಭಾಶಯಗಳು!
(ದಟ್ಸ್ ಕನ್ನಡ ವಾರ್ತೆ)