ಕಬ್ಬನ್ ಪಾರ್ಕಿನೊಳಗೆ ಪುರಂದರ ವೈಭವ
ಈ ಕಾರ್ಯಕ್ರಮವನ್ನು ತಪ್ಪಿಲ್ಲದೆ ನಡೆಸಿಕೊಂಡು ಬರುತ್ತಿರುವ ಸಂಸ್ಥೆಯ ಹೆಸರು ಪ್ರಕೃತಿ. ಪ್ರಕೃತಿಯ ಹರಿಕಾರ ಎಂ.ಎಸ್. ಪ್ರಸಾದ್. ಪ್ರಸಾದ್ ಮತ್ತು ಅವರ ತಂಡಕ್ಕೆ ದಟ್ಸ್ ಕನ್ನಡ ಶುಭಾಶಯಗಳು.
ಮುಂದಿನ ಭಾನುವಾರ ಡಿಸೆಂಬರ್ 28ಕ್ಕೆ ಪ್ರಕೃತಿ ಸಾದರಪಡಿಸುತ್ತಿರುವ ಇಂಪಾದ ಕನ್ನಡ ಸಂಗೀತ ಸಂಜೆಗಳಿಗೆ 13 ವಾರ ತುಂಬಲಿದೆ. ಲಾಭಾಪೇಕ್ಷೆ ಇಲ್ಲದೆ, ಸ್ವಂತ ಉಮೇದಿನಿಂದ ಕನ್ನಡ ಗೀತ-ಸಂಗೀತವನ್ನು ಉಚಿತವಾಗಿ ಹಂಚುತ್ತಾ ಬರುತ್ತಿರುವ ಪ್ರಕೃತಿ ಬಳಗ ನಿರಂತರವಾಗಿ ಸಂಗೀತ ಉಣಬಡಿಸಲಿ ಎಂದು ಆಶಿಸುತ್ತೇವೆ.
ಅಂದಹಾಗೆ, ಸದಾಕಾಲ ಯಾರಾದರೊಬ್ಬರು ಉಚಿತವಾಗಿ ಕನ್ನಡ ಪ್ರಸಾದವನ್ನು ಕೊಡುತ್ತಿದ್ದರೆ ಪಡೆಯಲು ಎಲ್ಲರೂ ಸಿದ್ಧರಾಗಿಯೇ ಇರುತ್ತಾರೆ. ಪ್ರಕೃತಿಗೆ ಹಾಗಾಗದಿರಲಿ. ಕಡೆಯಪಕ್ಷ ಆಟೋರಿಕ್ಷ ಮೀಟರ್ ವೆಚ್ಚಗಳನ್ನು ಭರಿಸಲು ಪ್ರಕೃತಿಗೆ ಕನ್ನಡ ಪ್ರೇಮಿ ಪ್ರಾಯೋಜಕರು ಮುಂದೆ ಬರಲಿ. ಕಬ್ಬನ್ ಪಾರ್ಕಿನಲ್ಲಿ ಭಾನುವಾರ ಕನ್ನಡ ಚಟುವಟಿಕೆಗಳು ನಿರಂತರವಾಗಿ ಸಾಗಲಿ.
ಬರುವ ಭಾನುವಾರದ ಸಂಜೆಯ ಕಥಾವಸ್ತು ದಾಸಶ್ರೇಷ್ಠ ಪುರಂದರದಾಸರ ಕವನಗಳನ್ನು ಆಧರಿಸಿದ ಕಾರ್ಯಕ್ರಮ 'ಪುರಂದರ ವೈಭವ'. ಪುರಂದರರ ಸಾರ್ವಕಾಲಿಕ ಜನಪ್ರಿಯ ರಚನೆಗಳಿಗೆ ಆವತ್ತು ಸ್ವರ ತಾಳ ಮೇಳೈಸುತ್ತಿದೆ. ಕಲಾವಿದರು : ಶಶಿಧರ ಕೋಟೆ ಮತ್ತು ತಂಡ. ಸ್ಥಳ : ಕಬ್ಬನ್ ಪಾರ್ಕಿನ ಬ್ಯಾಂಡ್ ಸ್ಟ್ಯಾಂಡ್. ಸಂಜೆ 5 ರಿಂದ 7. ಹೆಚ್ಚಿನ ವಿವರಗಳು ಬೇಕಿದ್ದರೆ ದೂರವಾಣಿ ಸಂಖ್ಯೆ ಗುರ್ತು ಹಾಕಿಕೊಳ್ಳಿ. 90084 08161
(ದಟ್ಸ್ ಕನ್ನಡ ಸಭೆ ಸಮಾರಂಭ)