ಮುಂಬೈ ದಾಳಿ : ಐಎಸ್ಐ ಮುಖ್ಯಸ್ಥ ಭಾರತಕ್ಕೆ ಬರುತ್ತಿಲ್ಲ
ಇಸ್ಲಾಮಾಬಾದ್, ನ. 29 : ಮುಂಬೈನಲ್ಲಾದ ಭಯೋತ್ಪಾದಕ ದಾಳಿಯ ತನಿಖೆ ಕುರಿತಂತೆ ಇಂಟರ್-ಸರ್ವಿಸ್ ಇಂಟೆಲಿಜೆನ್ಸ್ (ಐಎಸ್ಐ) ಮಹಾನಿರ್ದೇಶಕ ಲೆ.ಜೆ. ಅಹ್ಮದ್ ಶುಜಾ ಪಾಶಾ ಅವರನ್ನು ಭಾರತಕ್ಕೆ ಕಳಿಸುವುದಾಗಿ ಹೇಳಿದ್ದ ಪಾಕಿಸ್ತಾನ ಈಗ ಹಿಂದೇಟು ಹಾಕಿದೆ.
ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಜರ್ದಾರಿ, ಪ್ರಧಾನಿ ಯುಸೂಫ್ ರಾಜಾ ಮತ್ತು ಭೂಸೇನಾಪತಿ ಜನರಲ್ ಪರ್ವೆಜ್ ಕಯಾನಿ ಕಳೆದ ರಾತ್ರಿ ಭೇಟಿ ಮಾಡಿ ಶುಜಾ ಅವರನ್ನು ಭಾರತಕ್ಕೆ ಕಳಿಸದಿರಲು ನಿರ್ಧರಿಸಿದ್ದಾರೆ. ಶುಜಾ ಬದಲು ಐಎಸ್ಐ ಪ್ರತಿನಿಧಿಯನ್ನು ಭಾರತಕ್ಕೆ ಕಳಿಸಲಾಗುವುದು ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಭಾರತದ ಪ್ರಧಾನಿ ಮನಮೋಹನ ಸಿಂಗ್ ಅವರಿಚ್ಛೆಯಂತೆ ಐಎಸ್ಐ ಮಹಾನಿರ್ದೇಶಕ ಶುಜಾ ಅವರನ್ನು ಮುಂಬೈನಲ್ಲಿ ನಡೆದಿರುವ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಭಾರತಕ್ಕೆ ಕಳಿಸಲಾಗುವುದೆಂದು ಪಾಕ್ ವಿದೇಶಾಂಗ ಸಚಿವ ಷಾ ಮಹಮೂದ್ ಕುರೇಶಿ ಪ್ರಕಟಿಸಿದ್ದರು. ರಾಷ್ಟ್ರ, ಧರ್ಮ ಯಾವುದೇ ಇರಲಿ ಬರ್ಬರ ಕೃತ್ಯವನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸುತ್ತದೆ. ಭಯೋತ್ಪಾದನೆ ಯಾರೇ ಮಾಡಿರಲಿ ಅವರು ನಮ್ಮ ಸ್ನೇಹಿತರಲ್ಲ ಎಂದು ಕುರೇಶಿ ಹೇಳಿದ್ದರು.
200ಕ್ಕೂ ಹೆಚ್ಚು ಬಲಿ ತೆಗೆದುಕೊಂಡಿರುವ ಮುಂಬೈ ದಾಳಿಯ ಜವಾಬ್ದಾರಿಯನ್ನು ಹೊತ್ತಿರುವ ಡೆಕ್ಕನ್ ಮುಜಾಹಿದ್ದೀನ್ ಸಂಘಟನೆಯ ಪೂರ್ವಚರಿತ್ರೆ ನಮಗೆ ತಿಳಿದಿಲ್ಲ. ಇವರು ಎಲ್ಲಿಂದ ಉದ್ಭವಿಸಿದರು ಎಂಬುದು ದೇವರಿಗೆ ಮಾತ್ರ ಗೊತ್ತು ಎಂದು ಕುರೇಶಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
(ಏಜೆನ್ಸೀಸ್)