2000ರ ಚರ್ಚ್ ದಾಳಿ : 11 ಆರೋಪಿಗಳಿಗೆ ಮರಣದಂಡನೆ
ಬೆಂಗಳೂರು, ನ. 29 : 2000ನೇ ಇಸ್ವಿಯಲ್ಲಿ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಚರ್ಚ್ ಗಳ ಮೇಲೆ ನಡೆದ ಬಾಂಬ್ ದಾಳಿಗಳಿಗೆ ಸಂಬಂಧಿಸಿದಂತೆ 11 ಆರೋಪಿಗಳಿಗೆ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿದೆ ಮತ್ತು 12 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ದೃಢಪಡಿಸಿದೆ.
ಭದ್ರತಾ ಕಾರಣಗಳಿಂದಾಗಿ, ವಿಶೇಷ ನ್ಯಾಯಾಧೀಶ ಎಸ್.ಎಮ್. ಶಿವನಗೌಡರ್ ಅವರು ಸೆಷನ್ಸ್ ಕೋರ್ಟ್ ಸಂಕೀರ್ಣದಿಂದಲೇ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಶಿಕ್ಷೆ ಪ್ರಕಟಿಸಿದರು. ನಾಲ್ಕು ಪ್ರಕರಣಗಳಲ್ಲಿ 25 ಆರೋಪಿಗಳನ್ನು ವಿಶೇಷ ನ್ಯಾಯಾಲಯ ವಿಚಾರಣೆಗೆ ಗುರಿಪಡಿಸಿತ್ತು. ಅವರನ್ನೆಲ್ಲ ನಗರದ ಹೊರವಲಯದಲ್ಲಿರುವ ಪರಪ್ಪನ ಅಗ್ರಹಾರದಲ್ಲಿ ಸೆರೆಯಲ್ಲಿಡಲಾಗಿದೆ. ಮೂವರು ಆರೋಪಿಗಳು ಸಾವನ್ನಪ್ಪಿದ್ದಾರೆ, ಏಳು ಜನ ತಪ್ಪಿಸಿಕೊಂಡಿದ್ದಾರೆ ಮತ್ತು ಇಬ್ಬರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಗುಲಬರ್ಗಾ ಜಿಲ್ಲೆಯ ವಾಡಿ, ಹುಬ್ಬಳ್ಳಿಯ ಕೇಶ್ವಾಪುರ, ಬೆಂಗಳೂರಿನ ಜೆಜೆ ನಗರದ ಚರ್ಚ್ ಗಳಲ್ಲಿ ನಡೆಸಲಾದ ಬಾಂಬ್ ಸ್ಫೋಟಗಳು ಮತ್ತು ವ್ಯಾನ್ ಸ್ಫೋಟಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಎನ್. ನಿಲೋಗಲ್ ಅವರು ಈ ತೀರ್ಪು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ.
ಮರಣದಂಡನೆಗೆ ಒಳಗಾದವರು : ಮೊಹಮ್ಮದ್ ಇಬ್ರಾಹಿಂ, ಶೇಖ್ ಹಷಮ್ ಅಲಿ, ಹಸನುಜಮಾ, ಅಬ್ದುಲ್ ರೆಹಮಾನ್ ಶೇಠ್, ಅಮಾನತ್ ಹುಸೇನ್ ಮುಲ್ಲಾ, ಮೊಹಮ್ಮದ್ ಶರ್ಫುದ್ದಿನ್, ಸೈಯದ್ ಮುನೀರುದ್ದಿನ್ ಮುಲ್ಲಾ, ಮೊಹಮ್ಮದ್ ಅಖಿಲ್ ಅಹ್ಮದ್, ಇಜಾಹರ್ ಬೇಗ್, ಸೈಯದ್ ಅಬ್ಬಾಸ್ ಅಲಿ ಮತ್ತು ಮೊಹಮ್ಮದ್ ಖಾಲಿದ್ ಚೌಧರಿ.
ಜೀವಾವಧಿ ಶಿಕ್ಷೆಗೆ ಗುರಿಯಾದವರು : ಮೊಹಮ್ಮದ್ ಫರೂಕ್ ಅಲಿ, ಮೊಹಮ್ಮದ್ ಸಿದ್ದಿಕಿ, ಅಬ್ದುಲ್ ಹಬೀಬ್, ಶಂಶುಜಮ್ಮಾ, ಶೇಖ್ ಫರ್ದಿನ್ ವಲಿ, ಸೈಯದ್ ಅಬ್ದುಲ್ ಖಾದರ್ ಜಿಲಾನಿ, ಮೊಹಮ್ಮದ್ ಗಿಯಾಸುದ್ದಿನ್, ಮೀರಾಸಾಬ್ ಕೌಜಲಗಿ, ರಿಷ್ ಹಿರೇಮಠ್, ಬಶೀರ್ ಅಹ್ಮದ್, ಮೊಹಮ್ಮದ್ ಹುಸೇನ್ ಮತ್ತು ಸಾಂಗಲಿ ಬಾಷಾ.
ತಪ್ಪಿಸಿಕೊಂಡವರು : ಜಿಯಾ-ಉಲ್-ಹಸನ್, ಸೈಯದ್ ಖಾಲಿದ್ ಪಾಷಾ, ಜಾಹೇದ್ ಉಲ್ ಹಸನ್, ಶಬಿ ಉಲ್ ಹಸನ್, ಖಾಲೀದ್ ಪಾಷಾ, ಶೇಖ್ ಅಮೀರ್ ಮತ್ತು ಸೈಯದ್ ವಹಾಬ್.
ಖುಲಾಸೆ ಆದವರು : ಮೊಹಮ್ಮದ್ ರಿಯಾಜುದ್ದಿನ್, ಮೊಹಮ್ಮದ್ ಜಾಫರ್, ಇಸ್ಮಾಯಿಲ್ ಅಕ್ಕಿ, ಅಮೀರ್ ಹಂಜಾ.
(ಯುಎನ್ಐ)