ವರ್ಗಾವಣೆಯಿಂದ ಸರ್ಕಾರ ವೈಫಲ್ಯ :ಸಿದ್ದು
ಕೋಲಾರ, ನ. 25 : ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಜನತಾ ಪರಿವಾರ ಒಂದಾದರೂ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತಾ ಪರಿವಾರ ಮುಖಂಡರು ವಿವಿಧ ಪಕ್ಷಗಳಿಗೆ ಹರಿದು ಹಂಚಿಹೋಗಿದ್ದಾರೆ. ಇದೀಗ ಒಗ್ಗೋಡುವ ಮಾತುಗಳು ಕೇಳಿಬರುತ್ತಿವೆ, ಆದರೆ ಇದರಿಂದ ಯಾವ ಪ್ರಯೋಜನವನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಪರಿಣಾಮವೂ ಬೀರದು ಎಂದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡು ಸಿದ್ದರಾಮಯ್ಯ ಹೋದ ಕಡೆಯಲ್ಲೆಲ್ಲಾ ಸುಳ್ಳು ಭರವಸೆಗಳ ನೀಡುವ ಕೈಲಾಗದ ಯೋಜನೆಗಳನ್ನು ರೂಪಿಸುತ್ತಾ ಹೊರಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬರೀ ವರ್ಗಾವಣೆಯಲ್ಲಿಯೇ ಕಾಲ ಕಳೆದಿದೆ ಎಂದು ಟೀಕಿಸಿದ ಅವರು, ವರ್ಗಾವಣೆಯಿಂದ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಜತೆಗೆ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ಮೀತಿಮೀರಿದೆ. ಯಡಿಯೂರಪ್ಪನವರ ಅನುಭವದ ಕೊರತೆಯಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ ಎಂದು ಟೀಕಿಸಿದರು.
ಹಗಲಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಇರುವ ಸಿದ್ದರಾಮಯ್ಯ, ರಾತ್ರಿಯಾದ ಕೂಡಲೇ ಬಿಜೆಪಿ ಪಾಳೆಯದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ದೇವೇಗೌಡರ ಕುಟುಂಬದ ಜಾಯಮಾನವೇ ಅಂತಹದ್ದು, ಮನೆಯಲ್ಲಿ ಪಾಠ ಮಾಡುವವರು ಸರಿಯಾಗಿದ್ದರೆ, ಇಂತಹ ಬೇಜವಾಬ್ದಾರಿ ಹೇಳಿಕೆಗಳು ಬರುತ್ತಿರಲಿಲ್ಲ ಎಂದು ಪರೋಕ್ಷವಾಗಿ ದೇವೇಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದೇವೇಗೌಡರ ಮತ್ತ ಅವರ ಕುಟುಂಬ ಸದಸ್ಯರು ಯಾರನ್ನು ಬೆಳೆಯಲು ಬಿಟ್ಟಿಲ್ಲ, ಬಿಡುವುದಿಲ್ಲ. ಕಾಲೆಳೆಯುವುದು ಅವರ ಕಾಯಕ ಎಂದು ಸಿದ್ದರಾಮಯ್ಯ ಛೇಡಿಸಿದರು.
(ದಟ್ಸ್ ಕನ್ನಡ ವಾರ್ತೆ)