ಎಟಿಎಸ್ ನಿಂದ ಪ್ರಗ್ಯಾಸಿಂಗ್ ಗೆ ಭಾರಿ ಕಿರುಕುಳ
ಮುಂಬೈ, ನ. 25 : ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವುಗಳನ್ನು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಪ್ರಕರಣದ ಆರೋಪಿಗಳಾದ ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್, ಕರ್ನಲ್ ಪುರೋಹಿತ್, ಅಜಯ ವಾಹಿರಕರ್ ಹಾಗೂ ರಮೇಶ್ ಉಪಾಧ್ಯಾಯ ಅವರುಗಳು ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ಪಡೆ(ಎಟಿಎಸ್) ತಮಗೆ ನೀಡುತ್ತಿರುವುದನ್ನು ವಿಪರೀತ ಚಿತ್ರಹಿಂಸೆಯನ್ನು ನ್ಯಾಯಾಲಯದ ಮುಂದೆ ಸೋಮವಾರ ವಿವರಿಸಿದರು.
ಶಂಕಿತರ ಆರೋಪಿಗಳಿಗೆ ಜಾಮೀನು ನೀಡಲು ಮೋಕಾ ನ್ಯಾಯಾಲಯದ ನ್ಯಾಯಧೀಶ ವೈಡಿ ಸಿಂಧೆ ಸ್ಪಷ್ಟವಾಗಿ ನಿರಾಕರಿಸಿದರು. ಡಿ.3ರ ವರೆಗೆ ಆರೋಪಿಗಳ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಆದೇಶ ನೀಡಿದರು. ಈ ಸಂದರ್ಭದಲ್ಲಿ ಶಂಕಿತ ಆರೋಪಿಗಳು ಎಟಿಎಸ್ ಪೊಲೀಸರಿಂದ ಆಗುತ್ತಿರುವ ದೈಹಿಕ ಹಾಗೂ ಮಾನಸಿಕ ಹಲ್ಲೆಯನ್ನು ಬಿಡಿಬಿಡಿಯಾಗಿ ಬಿಚ್ಚಿಟ್ಟರು.
ಎಟಿಎಸ್ ಅಧಿಕಾರಿಗಳು ನನಗೆ ಅಶ್ಲೀಲ ಸಿಡಿಗಳನ್ನು ಕೇಳಿಸಿದ್ದಾರೆ. ದೈಹಿಕ ಹಾಗೂ ಮಾನಸಿಕವಾಗಿ ಹಲ್ಲೆ ನಡೆಸುವ ಮೂಲಕ ತೀವ್ರ ಕಿರುಕುಳ ನೀಡಿದ್ದಾರೆ ಎಂದು ಪ್ರಗ್ಯಾಸಿಂಗ ಆರೋಪಿಸಿದರು. ಮಾಲೇಗಾಂವ್ ಸ್ಫೋಟದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಳ್ಳದಿದ್ದರೆ ಕೊಂದುಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ನಾನು ತೀವ್ರ ಮಾನಸಿಕವಾಗಿ ವಿಚಲಿತವಾಗಿದ್ದೇನೆ ಎಂದು ಪ್ರಗ್ಯಾಸಿಂಗ್ ತನ್ನ ಅಳಲನ್ನು ನ್ಯಾಯಾಲಯದ ಮುಂದೆ ತೋಡಿಕೊಂಡರು.
ನನ್ನ ಎರಡು ಕಾಲಗಳನ್ನು ಮೇಲಕ್ಕೆ ಕಟ್ಟಿ ತಲೆಯನ್ನು ಕೆಳಗೆ ಮಾಡಿ ಕೈಗಳಿಗೆ ಕಟ್ಟಿ ರಾಡ್ ನಿಂದ ಹೊಡೆದಿದ್ದಾರೆ. ನಿನ್ನ ಮನೆಯಲ್ಲಿ ಆರ್ ಡಿಎಕ್ಸ್ ಇರುವುದನ್ನು ಒಪ್ಪಿಕೊಳ್ಳದಿದ್ದರೆ ನಿನ್ನನ್ನು ಮುಗಿಸಿಬಿಡುತ್ತೇವೆ ಎಂದು ಎಟಿಎಸ್ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂದು ಕರ್ನಲ್ ಪುರೋಹಿತ್ ನ್ಯಾಯಾಲಯಕ್ಕೆ ವಿವರಿಸಿದರು.
ಇನ್ನೊಬ್ಬ ಶಂಕಿತ ರಮೇಶ್ ಉಪಾಧ್ಯಾಯ ಹೇಳುವ ಪ್ರಕಾರ, ಎಟಿಎಸ್ ಅಧಿಕಾರಿಗಳಾದ ಪರಂಭೀರ್ ಹಾಗೂ ಸುಖ್ವಿಂದರ್ ಸಿಂಗ್ ಇಬ್ಬರೂ ನನ್ನ ಮೇಲೆ ಭಾರಿ ದೈಹಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೆ ತಪ್ಪೊಪ್ಪಿಕೊಳ್ಳದಿದ್ದರೆ ಪೊಲೀಸ್ ಠಾಣೆಯಲ್ಲೇ ನಿನ್ನ ಹೆಂಡತಿ ಮತ್ತು ಮಗಳನ್ನು ಅಧಿಕಾರಿಗಳೆಲ್ಲರೂ ಸಾಮೂಹಿಕ ಅತ್ಯಾಚಾರ ಮಾಡುತ್ತೇವೆ ಎಂದು ಹೆದರಿಸುತ್ತಾರೆ ಎಂದು ಮೋಕಾ ನ್ಯಾಯಾಲಯಕ್ಕೆ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)