ರಾಜಕೀಯ ಲಾಭಕ್ಕಾಗಿ ಪ್ರಾದೇಶಿಕತೆ ಅಸ್ತ್ರ
ನವದೆಹಲಿ, ನ. 18 : ಭಾರತದ ಒಕ್ಕೂಟ ವ್ಯವಸ್ಥೆಗೆ ದಕ್ಕೆ ಬರುವ ರೀತಿಯಲ್ಲಿ ಕೆಲ ಸಂಘಟನೆಗಳ ನಾಯಕರು ಪ್ರಾದೇಶಿಕ ವಿಷಯ ಮೂಲಕ ತಮ್ಮ ರಾಜಕೀಯ ಲಾಭಕ್ಕಾಗಿ ಒಡೆದು ಆಳುವ ನೀತಿ ಅನುಸರಿಸುತ್ತಿರುವುದು ಶುದ್ಧ ತಪ್ಪು. ಇದರಿಂದ ಸಂವಿಧಾನದ ಆಶಯಕ್ಕೆ ಗಂಡಾಂತರ ಎದುರಾಗುವ ಸಾಧ್ಯತೆ ಇದೆ ಎಂದು ಸುಪ್ರಿಂಕೋರ್ಟ್ ನ್ಯಾಯಮೂರ್ತಿ ಡಾ. ಕೆ ಜಿ ಬಾಲಕೃಷ್ಣನ್ ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಇದೇ ರೀತಿಯ ಬೆಳವಣಿಗೆಗಳು ದೇಶದಲ್ಲಿ ಮುಂದುವರೆದಲ್ಲಿ ದೇಶಕ್ಕೆ ಅಪಾಯ ಎದುರಾಗುವುದರಲ್ಲಿ ಸಂಶಯವಿಲ್ಲ ಎಂದರು. ಭಾರತದ ಸಂವಿಧಾನ ಒಕ್ಕೂಟ ವ್ಯವಸ್ಥೆಯನ್ನು ಆಧರಿಸಿದೆ. ಭಾರತೀಯರೆಲ್ಲರೂ ಒಂದೇ ಎಂಬ ಮನೋಭಾವದಿಂದ ಜೀವನ ನಡೆಸುತ್ತಿದ್ದಾರೆ. ಆದರೆ ಇತ್ತೀಚೆಗೆ ಒಂದೆರಡು ರಾಜ್ಯಗಳಲ್ಲಿ ಕೆಲ ಸಂಘಟನೆಗಳ ಮುಖ್ಯಸ್ಥರು ಪ್ರಾದೇಶಿಕ ವಿಷಯಗಳ ಮೇಲೆ ವಿಂಗಡಣೆ ಮಾಡಿ ಸಂವಿಧಾನಕ್ಕೆ ಅಪಚಾರ ಎಸಗುತ್ತಿದ್ದಾರೆ. ಇದರಿಂದ ತಮ್ಮ ರಾಜಕೀಯ ಲಾಭ ಗಳಿಸಿಕೊಳ್ಳುತ್ತಿರುವುದರ ಹಿಂದಿನ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದರು.
ವಿವಿಧತೆಯಲ್ಲಿ ಏಕತೆಯನ್ನು ದೇಶದ ಎಲ್ಲೆಡೆ ಕಾಣಬಹುದು. ಅನೇಕ ಭಾಷೆ, ನೊರೆಂಟು ಜನಾಂಗಗಳು ನಮ್ಮಲ್ಲಿವೆ. ಈ ಪರಿಸರಕ್ಕೆ ನಾವು ಹೊಂದುಕೊಂಡು ಜೀವನ ನಡೆಯುತ್ತಿದ್ದೇವೆ. ಸ್ವಾರ್ಥಕ್ಕಾಗಿ ಇದನ್ನು ನಾಶ ಮಾಡುವ ಕೆಲಸ ತರವಲ್ಲ. ತತ್ವ ಸಿದ್ಧಾಂತ, ನೈತಿಕತೆ ಮಾಯವಾಗಿದೆ ಎಂದು ಬಾಲಕೃಷ್ಣನ್ ವಿಷಾಧಿಸಿದರು.
ಮಹಾರಾಷ್ಟ್ರದಲ್ಲಿ ಮರಾಠಿಗರು ಅಲ್ಪಸಂಖ್ಯಾತರಾಗಿದ್ದಾರೆ. ಹಿಂದಿ ಭಾಷೆಯ ಜನರ ದಬ್ಬಾಳಿಕೆ ಜಾಸ್ತಿಯಾಗಿದೆ. ಸರ್ಕಾರಿ ನೌಕರಿಯಲ್ಲಿಯೂ ಕೂಡಾ ಅವರದೇ ಕಾರುಬಾರು ಎಂದು ಆರೋಪಿಸಿದ್ದ ಮಹಾರಾಷ್ಟ್ಪ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ರೈಲ್ವೆ ಇಲಾಖೆಗೆ ನಡೆಯುತ್ತಿದ್ದ ಪರೀಕ್ಷಾ ಕೇಂದ್ರದ ಮೇಲೆ ದಾಳಿ ನಡೆಸಿ ಪರೀಕ್ಷಾರ್ಥಿಗಳ ಮೇಲೆ ಹಲ್ಲೆ ನಡೆಸಿರುವುದನ್ನು ನೆನೆಪಿಸಿಕೊಳ್ಳಬಹುದು.
(ದಟ್ಸ್ ಕನ್ನಡ ವಾರ್ತೆ)