ಟಿಕೆಟ್ ಕಾಳಸಂತೆಯಲ್ಲಿ ಕಾಗೋಡು,ಕೊಂಡಯ್ಯ
ಮೈಸೂರು, ನ. 13 : ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಲೇವಾದೇವಿ ನಡೆದಿರುವುದು ನಿಜ. ಮಾರ್ಗರೆಟ್ ಆಳ್ವ ಮಾಡಿರುವ ಆರೋಪದಲ್ಲಿ ಸತ್ಯವಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ನರೇಂದ್ರ ಸ್ವಾಮಿ ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಕಾಂಗ್ರೆಸ್ ನಾಯಕರಾದ ಕೆ ಸಿ ಕೊಂಡಯ್ಯ ಹಾಗೂ ಕಾಗೋಡು ತಿಮ್ಮಪ್ಪ ಹಂಚಿಕೆಯ ಲಂಚಾವತಾರದಲ್ಲಿ ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಇಬ್ಬರು ನಾಯಕರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ನಿಜಾಂಶ ಹೊರಬರಲಿದೆ ಎಂದರು. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಕೆ ಸಿ ಕೊಂಡಯ್ಯ, ಕಾಗೋಡು ತಿಮ್ಮಪ್ಪ ಹಾಗೂ ಮಾರ್ಗರೆಟ್ ಆಳ್ವ ಮೂವರು ಸೇರಿಕೊಂಡು ನನಗೆ ಟಿಕೆಟ್ ದೊರೆಯದಂತೆ ನೋಡಿಕೊಂಡರು. ಈ ವೇಳೆಯಲ್ಲಿ ಹಣ ನೀಡಿದವರಿಗೆ ಪಕ್ಷದ ಟಿಕೆಟ್ ಗಳನ್ನು ನೀಡಿರುವುದು ಸತ್ಯ ಎಂದು ನೇರ ಆರೋಪ ಮಾಡಿದರು.
ಮಾನನಷ್ಟ ಮೊಕದ್ದಮೆ, ಕಾಗೋಡು: ಸಮಾಜ ಕಲ್ಯಾಣ ಸಚಿವ ನರೇಂದ್ರಸ್ವಾಮಿ ಮಾಡಿರುವ ಆರೋಪಕ್ಕೆ ಶಿವಮೂಗ್ಗದಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಚಿವರು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದೊಂದು ಕುಚೋದ್ಯದ ಆಪಾದನೆಯಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಚಿವರು ಮಾಡಿರುವ ಆರೋಪಕ್ಕೆ ತೀವ್ರ ಮುಜುಗರ ಉಂಟಾಗಿದೆ. ಅದ್ದರಿಂದ ಅವರ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಗುಡುಗಿದರು.
(ದಟ್ಸ್ ಕನ್ನಡ ವಾರ್ತೆ)