ಲೋಡ್ ಶೆಡ್ಡಿಂಗ್ ಗೆ ಜನತೆ ತೀವ್ರ ಆಕ್ರೋಶ
ಬೆಂಗಳೂರು, ನ. 9 : ರಾಜ್ಯದಲ್ಲಿ ವಿದ್ಯುತ್ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದೆ. ಉದ್ಘಾಟನೆಯಾದ ವಾರದೊಳಗೆ ಬಳ್ಳಾರಿ ಶಾಖೋತ್ಪನ್ನ ಘಟಕ ಸ್ಥಗಿತಗೊಂಡಿದ್ದರಿಂದ ರಾಜ್ಯ ಅನಿಮಿತ ಲೋಡ್ ಶೆಡ್ಡಿಂಗ್ ಪ್ರಮಾಣ ಮತ್ತಷ್ಟು ಹೆಚ್ಚಿದ್ದರಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬಳ್ಳಾರಿ ಘಟಕದಲ್ಲಿನ ಕೊಳೆವೆ ನೀರು ಸೋರಿಕೆಯಿಂದಾಗಿ ಶುಕ್ರವಾರ ಬೆಳಗ್ಗೆಯಿಂದಲೇ ಉತ್ಪಾದಯನ್ನೆ ಸ್ಥಗಿತಗೊಳಿಸಲಾಗಿದ್ದು, ಇದರಿಂದಾಗಿ ಸುಮಾರು 350 ಮೆಗಾವ್ಯಾಟ್ ವಿದ್ಯುತ್ ಖೋತಾ ಆಗಿದೆ. ಇದರ ಬಿಸಿ ಗ್ರಾಹಕರಿಗೆ ತಟ್ಟಿದ್ದು, ಬೆಂಗಳೂರು ನಗರದಲ್ಲಿ ಶನಿವಾರ 5 ರಿಂದ 6 ಗಂಟೆ ಕಾಲ ಅನಿಯಮಿತ ಲೋಡ್ ಶೆಡ್ಡಿಂಗ್ ಮಾಡಲಾಗಿದೆ.
ಬಳ್ಳಾರಿಯ ಘಟಕದ ಒಟ್ಟು ಸಾಮರ್ಥ್ಯ 500 ಮೆಗಾವ್ಯಾಟ್ ಆಗಿದ್ದು, ಸದ್ಯಕ್ಕೆ 350 ಮೆಗಾವ್ಯಾಟ್ ನಷ್ಟು ವಿದ್ಯುತ್ ಲಭ್ಯವಾಗುತ್ತಿತ್ತು. ಆದರೆ ದಿಢೀರನೇ ಕೈಕೊಟ್ಟಿದೆ. ಇದರಿಂದ ಅನಿವಾರ್ಯವಾಗಿ ಶನಿವಾರ ಎಲ್ಲ ಕಡೆ ಅನಿಯಮಿತ ಲೋಡ್ ಶೆಡ್ಡಿಂಗ್ ಭಾರಿ ಪ್ರಮಾಣದಲ್ಲಾಗಿದೆ ಎಂದು ಮೂಲಗಳು ತಿಳಿಸಿವೆ. ಈಗಿನ ಲೆಕ್ಕಾಚಾರದಂತೆ ಸೋಮವಾರದವರೆಗೂ ಇದೇ ಸ್ಥಿತಿ ಮುಂದುವರೆಲಿದೆ. ಒಂದು ವೇಳೆ ದುರಸ್ತಿ ವಿಳಂಬವಾದರೆ ಮತ್ತಷ್ಟು ದಿನ ಲೋಡ್ ಶೆಡ್ಡಿಂಗ್ ಮುಂದುವರೆಯುವುದು ಖಚಿತವಾಗಿದೆ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)