ಕೆ ಎಂಎಫ್ ನೇಮಕಾತಿ ಕರ್ಮಕಾಂಡ ಬಯಲು
ಬೆಂಗಳೂರು, ನ. 9 : ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಾಹಾಮಂಡಲ (ಕೆಎಂಎಫ್) ದಲ್ಲಿ ನಡೆದಿರುವ ಅವ್ಯವಹಾರ ಹಾಗೂ ಕಾನೂನು ಉಲ್ಲಂಘನೆ ಪ್ರಕರಣಗಳನ್ನು ಕೊನೆಗೂ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ರಾಜ್ಯ ಸರ್ಕಾರ ಕೆಎಂಫ್ ಕರ್ಮಕಾಂಡವನ್ನು ಬಯಲು ಮಾಡಲು ಹೊರಟಿದೆ.
ಕೆಎಂಎಫ್ ಅಧ್ಯಕ್ಷ ಎಚ್.ಡಿ.ರೇವಣ್ಣ ಹಾಗೂ ರಾಜ್ಯ ಸರ್ಕಾರದ ನಡುವೆ ಹಾಲಿನ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ನಡೆದಿರುವ ಗುದ್ದಾಟದ ಹಿನ್ನೆಲೆಯಲ್ಲಿ ಈಗ ಕೆಎಂಫ್ ಅನ್ನು ದೀರ್ಘ ಕಾಲದಿಂದ ಆಳುತ್ತಿರುವ ರೇವಣ್ಣ ಅವರ ಅವಧಿಯಲ್ಲಿ ಕಾನೂನಿಗೆ ವಿರುದ್ಧವಾಗಿ ನಡೆದಿರುವ ನೇಮಕಾತಿ ಹಾಗೂ ಬಡ್ತಿ ಮೀಸಲಾತಿ ನಿಯಮಗಳ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹೆಚ್ಚಿದೆ.
ಕೆಎಂಫ್ ವಿರುದ್ಧ ಸರ್ಕಾರ ಇಟ್ಟಿರುವ ಹೆಜ್ಜೆಯನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಗಳು ಕಡಿಮೆ ಇದ್ದು ಸದ್ಯದಲ್ಲಿಯೇ ಅಕ್ರಮಗಳು ರಾಶಿಯನ್ನೇ ಹೊರಹಾಕುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ಸರ್ಕಾರ ಹಾಗೂ ರೇವಣ್ಣ ನಡುವಿನ ಗುದ್ದಾಟದಲ್ಲಿ ಕೆಎಂಎಫ್ ಈಗ ನಿಜವಾಗಿಯೂ ಗಂಡಾಂತರಕ್ಕೆ ಸಿಲುಕಿದೆ.
ಕೆಎಂಫ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಮತ್ತು ಪದೋನ್ನತಿಗಳಲ್ಲಿ ಮೀಸಲಾತಿ ನಿಯಮಗಳ ಉಲ್ಲಂಘನೆ ಆಗಿರುವುದಲ್ಲದೆ ರೋಸ್ಟರ್ ಪದ್ಧತಿ ಅನುಸರಿಸದೆ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವರ್ಗದವರಿಗೆ ಅನ್ಯಾಯ ಆಗಿರುವುದು ಬೆಳಕಿಗೆ ಬಂದಿದೆ. ಆರಂಭಿಕ ವರದಿಯಂತೆ ನೇರ ನೇಮಕಾತಿ ವಿಭಾಗದಲ್ಲಿ ಪರಿಶಿಷ್ಟ ಜಾತಿ ವರ್ಗಗಳಿಗೆ ಸೇರಬೇಕಾದ 15 ಹುದ್ದೆಗಳು ಹಾಗೂ ಪದೋನ್ನತಿಯಲ್ಲಿ 30 ಹುದ್ದೆ ಸೇರಿ ಒಟ್ಟು 45 ಹುದ್ದೆಗಳು ಪರಿಶಿಷ್ಟರಿಗೆ ದೊರೆಯದೆ ವಂಚನೆ ಆಗಿರುವುದು ತನಿಖೆಯಿಂದ ತಿಳಿದು ಬಂದಿದೆ.
(ದಟ್ಸ್ ಕನ್ನಡ ವಾರ್ತೆ)