ಸಾಲದ ಮೇಲಿನ ಬಡ್ಡಿದರ ಕಡಿತ :ಚಿದಂಬರಂ
ನವದೆಹಲಿ, ನ. 4 : ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆಗೊಳಿಸಲಾಗುವುದು. ಜೊತೆಗೆ ಮುಂದಿನ ದಿನಗಳಲ್ಲಿ ಗೃಹ ಸಾಲ ಹಾಗೂ ಮತ್ತಿತರ ಸಾಲದ ಮೇಲಿನ ಬಡ್ಡಿದರವನ್ನು ಕೂಡಾ ಗಮನಾರ್ಹ ರೀತಿಯಲ್ಲಿ ಕಡಿತಗೊಳಿಸಲು ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುವುದು ಎಂದು ಕೇಂದ್ರದ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದರು.
ಜಾಗತಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಯ ಮೇಲೆ ಬೀರಿರುವ ವ್ಯತಿರಿಕ್ತ ಪರಿಣಾಮದ ಹಿನ್ನೆಲೆಯಲ್ಲಿ ಬ್ಯಾಂಕ್ ಠೇವಣಿ ಸುಭದ್ರಗೊಳಿಸುವುದು ಸೇರಿದಂತೆ ಮತ್ತಿತರ ಮಹತ್ವದ ಸಂಗತಿಗಳನ್ನು ಚರ್ಚಿಸಲು ಇಂದು ನಡೆದ ಸರ್ಕಾರಿ ಹಾಗೂ ಸರ್ಕಾರೇತರ ಸಾರ್ವಜನಿಕ ಬ್ಯಾಂಕುಗಳ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಥಿಕ ಬಿಕ್ಕಟ್ಟಿನ ಕಠಿಣತೆಯನ್ನು ಖಾಸಗಿ ಬ್ಯಾಂಕುಗಳ ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು. ಬ್ಯಾಂಕುಗಳಿಂದ ಅಧಿಕ ಪ್ರಮಾಣದಲ್ಲಿ ಸಾಲ ನೀಡುವುದು ಕೆಲ ಕಾಲ ನಿಲ್ಲಿಸಲು ಸಾರ್ವಜನಿಕ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ ಎಂದ ಚಿದಂಬರಂ, ಜಾಗತಿಕ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸುವ ಎಲ್ಲ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳತ್ತಿದೆ ಎಂದು ಹೇಳಿದರು.
ಸೋಮವಾರ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕೈಗಾರಿಕೆ ಮತ್ತು ಉದ್ಯಮಿಗಳ ಸಭೆಯಲ್ಲಿ ಭಾಗವಹಿಸಿ ಹಣಕಾಸು ವ್ಯವಸ್ಥೆಯ ಜಾಗತಿಕ ಬಿಕ್ಕಟ್ಟು ಭಾರಿ ಪರಿಣಾಮ ಬೀರಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಉಲ್ಭಣಿಸುವ ಸಾಧ್ಯತೆಗಳಿವೆ. ಆದ್ದರಿಂದ ಬ್ಯಾಂಕುಗಳ ಠೇವಣಿ ಸುಭದ್ರ ಹಾಗೂ ದೇಶದ ಆರ್ಥಿಕ ಗತಿಯನ್ನು ಸಮ ಪ್ರಮಾಣದಲ್ಲಿ ಕಾಪಾಡಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಹೇಳಿದ್ದರು. ಬ್ಯಾಂಕುಗಳ ಹಿಂದೆ ಸರ್ಕಾರ ಇದೆ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಅವರು ಪುನರುಚ್ಚರಿಸಿದ್ದರು.
ಇಂದು ನಡೆದ ಸಾರ್ವಜನಿಕ ವಲಯದ ಬ್ಯಾಂಕುಗಳ ಸಭೆಯಲ್ಲಿ ಎಸ್ ಬಿಐ ಚೇರಮನ್ ಒ.ಎಂ.ಭಟ್, ಪಿಎನ್ ಬಿ ಮುಖ್ಯಸ್ಥ ಕೆ.ಸಿ.ಚಕ್ರವರ್ತಿ, ಬ್ಯಾಂಕ್ ಆಫ್ ಬರೋಡಾದ ಎಂ.ಡಿ.ಮಲ್ಯ, ಕೆನರಾ ಬ್ಯಾಂಕ್ ನ ಎ.ಸಿ.ಮಹಾಜನ್, ಯುಸಿಓ ಬ್ಯಾಂಕಿನ ಸಿಎಂಡಿ ಎಸ್.ಕೆ.ಗೋಯಲ್ ಸೇರಿದಂತೆ ಆರ್ ಬಿಐ ಹಾಗೂ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)
ಬ್ಯಾಂಕ್
ಠೇವಣಿಗಳ
ಬಗ್ಗೆ
ಆತಂಕ
ಬೇಡ:ಪ್ರಧಾನಿ
ಆರ್ಥಿಕ
ಬಿಕ್ಕಟ್ಟಿಗೆ
ನಾರಾಯಣ
ಮೂರ್ತಿ
ಸಲಹೆ