ಹೈಕ ಸಮಸ್ಯೆ ಇತ್ಯರ್ಥಕ್ಕೆ ಶೀಘ್ರ ಬಿಎಸ್ ವೈ ದೆಹಲಿಗೆ
ಬೆಂಗಳೂರು, ನ. 1 : ಅನೇಕ ದಶಕಗಳ ಹೋರಾಟದ ಫಲವಾಗಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವ ಮೂಲಕ ಕನ್ನಡಿಗರ ಕನಸನ್ನು ನನಸು ಮಾಡಿರುವ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದರು. ಹೈದರಾಬಾದ್- ಕರ್ನಾಟಕಕ್ಕೆ ಸಂಬಂಧಿಸಿದಂತೆ ಸಂವಿಧಾನದ ಕಲಂ 371 ತಿದ್ದುಪಡಿ ವಿಷಯವನ್ನು ಶೀಘ್ರದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಬಳಿ ಚರ್ಚಿಸಲಾಗುವುದು ಎಂದು ಹೇಳಿದರು.
ರಾಜ್ಯೋತ್ಸವದ ಅಂಗವಾಗಿ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕ ಜನತೆಯ ಬೇಡಿಕೆ ಈಡೇರಿಕೆಗೆ ಸರ್ಕಾರ ಸರ್ವ ಪ್ರಯತ್ನ ನಡೆಸಲಿದೆ ಎಂದರು. ಈ ಮಧ್ಯೆ 371 ಕಲಂ ತಿದ್ದುಪಡಿಗೆ ಆಗ್ರಹಿಸಿ ಗುಲ್ಬರ್ಗಾ ಮತ್ತು ರಾಯಚೂರು ಜಿಲ್ಲೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಜನರು ಶಾಂತಿ ಸಮಾಧಾನದಿಂದ ವರ್ತಸಿಬೇಕು. ರಾಜ್ಯ ಸರ್ಕಾರ ಕೂಡಾ ಈ ವಿಷಯದಲ್ಲಿ ಭಾರಿ ಪ್ರಯತ್ನ ನಡೆಸಲು ಪೂರ್ನ ತಯಾರಿ ಮಾಡಿಕೊಳ್ಳತೊಡಗಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ 8 ಸಾವಿರ ಶಿಕ್ಷಕರನ್ನು ಶೀಘ್ರದಲ್ಲಿ ನೇಮಕ ಮಾಡಿಕೊಳ್ಳಲಿದೆ. ಅದರಲ್ಲಿ 5 ಸಾವಿರ ಪ್ರಾಥಮಿಕ ಶಾಲೆ ಹಾಗೂ 300 ಸಾವಿರ ಪ್ರೌಢ ಶಾಲೆ ಶಿಕ್ಷಕರನ್ನು ನೇಮಕಕ್ಕೆ ಶೀಘ್ರ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದರು. ಆರೋಗ್ಯ ಕವಚ ಯೋಜನೆಯಲ್ಲಿ ತುರ್ತು ಸೇವೆ ಒದಗಿಸಲಾಗುವುದು. ಇದಕ್ಕಾಗಿ 517 ಅಂಬುಲೆನ್ಸ್ ಗಳನ್ನು ಬಿಡುಗಡೆ ಮಾಡಲಾಗುವುದು. 2010ರ ವೇಳೆಗೆ ಈ ಯೋಜನೆ ಸಂಪೂರ್ಣ ಜಾರಿಯಾಗಲಿದೆ ಎಂದು ಭರವಸೆ ನೀಡಿದರು. ಇಂದು ನಡೆದ ಭವ್ಯ ಸಮಾರಂಭದಲ್ಲಿ ನಗರದ ವಿವಿಧ ಶಾಲಾ ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರಗನ್ನು ತಂದುಕೊಟ್ಟರು.
(ದಟ್ಸ್ ಕನ್ನಡ ವಾರ್ತೆ)