ಉಪಚುನಾವಣೆಗೆ ಕಾಂಗ್ರೆಸ್ ಆತ್ಮಾವಲೋಕನ ಸಭೆ
ಬೆಂಗಳೂರು, ಅ. 29 : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅನುಭವಿಸಿದ ಸೋಲಿನ ಸಾಧಕ-ಬಾಧಕಗಳನ್ನು ಅತ್ಮಾವಲೋಕನ ಮಾಡಿಕೊಳ್ಳಲು ನವೆಂಬರ್ 5 ರಂದು ರಾಜ್ಯದ ಎಲ್ಲಾ ಕ್ಷೇತ್ರಗಳ ಮಾಜಿ ಶಾಸಕರು, ಸಚಿವರು, ಸಂಸದರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯನ್ನು ಕರೆಯಲಾಗುವುದು ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಉಪಚುನಾವಣೆಗೆ ಬಿಜೆಪಿ ಪಕ್ಷವನ್ನು ಎದುರಿಸುವ ಕುರಿತು ಚರ್ಚಿಸಲಾಗುವುದು ಎಂದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತಿದೆ. ಸೋಲಿನ ಕಾರಣ ತಿಳಿಯಲು ಸಭೆ ಕರೆಯಲಾಗಿದ್ದು, ಸಭೆಗೆ ರಾಜ್ಯದ ಅಷ್ಟೂ ಕ್ಷೇತ್ರದ ಮಾಜಿ ಶಾಸಕರು, ಸಚಿವರು, ಪಕ್ಷದ ವಿವಿಧ ಘಟಕದ ಕಾರ್ಯಕರ್ತರು ಭಾಗವಹಿಸಲು ಈಗಾಗಲೇ ತಿಳಿಸಲಾಗಿದೆ. ಸಭೆಯಲ್ಲಿ ಸೋಲಿನ ಆತ್ಮಾವಲೋಕನ ನಡೆಯಲಿದೆ ಎಂದು ಶಿವಕುಮಾರ್ ತಿಳಿಸಿದರು.
ಕಳೆದ ವಿಧಾನಸಭೆ ಸೋಲಿನ ಬಗ್ಗೆ ಸ್ಪಷ್ಟವಾದ ಮಾಹಿತಿ ತಿಳಿದುಕೊಳ್ಳುವ ಸಲುವಾಗಿ ಸತ್ಯ ಶೋಧನಾ ಸಮಿತಿ ರಚಿಸಲಾಗುವುದು ಎಂದ ಅವರು, ಸಮಿತಿ ವರದಿ ನೀಡಿದ ನಂತರ ಪಕ್ಷದ ಬಲವರ್ಧನೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು. ಕಾರ್ಯಕರ್ತರಲ್ಲಿ ಅನೇಕ ರೀತಿಯಲ್ಲಿ ಗೊಂದಲಗಳಿರುವುದು ಗಮನಕ್ಕೆ ಬಂದಿದೆ. ಕೆಲವಡೆ ಸ್ಥಳೀಯ ನಾಯಕರಿಂದ ಕಾಂಗ್ರೆಸ್ ಪಕ್ಷಕ್ಕೆ ಹಾನಿಯಾಗಿರುವುದು ಸಹ ತಿಳಿದಿದೆ. ಈ ಎಲ್ಲ ಅಂಶಗಳನ್ನು ಕೂಡಾ ಸಭೆಯಲ್ಲಿ ಚರ್ಚಿಸಲಾಗುವುದು. ಅಗತ್ಯ ಬಿದ್ದರೆ ಕೆಲವಡೆ ಇರುವ ಪದಾಧಿಕಾರಿಗಳನ್ನು ಬದಲಾಯಿಸಲು ಯೋಚನೆ ಮಾಡಲಾಗಿದೆ. ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)