ಸಾಧ್ವಿಗೆ ಇಂದು ನಾರ್ಕೋಅನಲೀಸಸ್ ಪರೀಕ್ಷೆ
ಮುಂಬೈ, ಅ. 28 : ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮಧ್ಯಪ್ರದೇಶದ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ನಾರ್ಕೋಅನಲೀಸಸ್ ಪರೀಕ್ಷೆಗೆ ಒಳಪಡಿಸಲಾಗುವುದು.
ಮಾಲೇಗಾಂವ್ ಬಾಂಬ್ ಸ್ಫೋಟದಲ್ಲಿ ಹಿಂದು ಸಂಘಟನೆಗಳ ಕೈವಾಡವಿದೆ ಎನ್ನುವ ಮಾಹಿತಿ ತನಿಖೆಯಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳದ ಪೊಲೀಸರು ಹಿಂದೂ ಜಾಗರಣ ಮಂಚ್ ನ ಸಕ್ರಿಯ ಕಾರ್ಯಕರ್ತೆ ಮಧ್ಯಪ್ರದೇಶದ ಮೂಲದ ಪ್ರಗ್ಯಾಸಿಂಗ್ ಠಾಕೂರ್ ಅವರನ್ನು ಕಳೆದ ವಾರ ಬಂಧಿಸಿ ನಾಸಿಕ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ವಿಚಾರಣೆಯ ನಂತರ ನ್ಯಾಯಾಲಯ ಹೆಚ್ಚಿನ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ನಾರ್ಕೋ ಅನಲೀಸಸ್ ಪರೀಕ್ಷೆ ಒಳಪಡಿಸಿ ಎಂದು ಪೊಲೀಸರಿಗೆ ಸೂಚನೆ ನೀಡಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಇಂದು ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಅವರನ್ನು ಬ್ರೇನ್ ಮ್ಯಾಪಿಂಗ್, ಹಾಗೂ ಪಾಲಿಗ್ರಫಿ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಗ್ಯಾಸಿಂಗ್ ನಂತರ ಬಂಧಿಸಲಾಗಿರುವ ಶಶಿಕಲಾ ಅವರು ಪ್ರಕರಣದ ಭಾಗಿಯಾಗಿರುವುದು ಸ್ಫಷ್ಟವಾಗಿದೆ. ಆದರೆ ಅದರಲ್ಲಿ ಅಷ್ಟಾಗಿ ತೊಡಗಿಸಿಕೊಂಡಿಲ್ಲ ಎಂದು ಮಹಾರಾಷ್ಟ್ರ ಎಟಿಎಸ್ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)
ಮಾಲೇಗಾಂವ್ ಸ್ಫೋಟದಲ್ಲಿ ಹಿಂದು ಸಾಧ್ವಿ