80 ಮಂದಿ ಧಾನ್ಯ ಕಳ್ಳರ ಅಮಾನತು
ಬೆಂಗಳೂರು, ಅ. 28 : ಕಾಳಸಂತೆಯಲ್ಲಿ ಪಡಿತರ ಆಹಾರ ಧಾನ್ಯ ಮಾರುವವರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ 39 ಮಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಇಲಾಖೆ ಸಚಿವ ಹರತಾಳ್ ಹಾಲಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಅಧಿಕಾರಿಗಳು ಸೇರಿ 80 ಮಂದಿ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದರು. ಕಾಳಸಂತೆ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 781 ಸಿವಿಎಸ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಸರ್ಕಾರ ಪಡಿತರ ಆಹಾರಧಾನ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸದೆ, ಕಾಳ ಸಂತೆ ಮಾರಾಟ ಮಾಡುವ ವಂಚಕರ ವಿರುದ್ದ ಖಂಡಿತವಾಗಿಯೂ ಶಿಸ್ತುಕ್ರಮ ಜರುಗಿಸಲಿದೆ ಎಂದು ಹೇಳಿದರು.
ಮಡಿಕೇರಿ ಹಾಗೂ ಚಿಕ್ಕಮಗಳೂರು ಪ್ರದೇಶಗಳಲ್ಲಿ ಕಾಫಿ ಪ್ಲಾಂಟೇಷನ್ ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಬಿಪಿಎಲ್ ಕಾರ್ಡ್ ನೀಡಲು ಸರ್ಕಾರ ನಿರ್ಧರಿಸಿದೆ. ಇಷ್ಟರಲ್ಲಿಯೇ ಈ ಕುರಿತು ಪ್ರಕ್ರಿಯೆಗಳನ್ನು ಆರಂಭವಾಗಲಿದ್ದು, ಅರ್ಹ ಫಲಾನುಭವಿಗಳಿಗೆ ಸರ್ಕಾರ ನೀಡುವ ಪ್ರಯೋಜನವಾಗುವ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹಾಲಪ್ಪ ವಿವರಿಸಿದರು.
ಕಳೆದ ಕೆಲ ತಿಂಗಳ ಹಿಂದೆ ಸಚಿವ ಹರತಾಳ್ ಹಾಲಪ್ಪ ಮತ್ತು ಆಹಾರ ಆಹಾರ ಇಲಾಖೆ ಆಯುಕ್ತ ಕೆ.ಶಿವರಾಂ ಅವರು ಅನೇಕ ನ್ಯಾಯಬೆಲೆ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ ಕಾಳಸಂತೆ ಮಾರಾಟ ಸೇರಿ ಅನೇಕ ಪ್ರಕರಣಗಳನ್ನು ಬಯಲಿಗೆಳೆದಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಕೂಡಾ ಪಡಿತರ ಚೀಟಿ ಪ್ರಕರಣದಲ್ಲಿ ಅವ್ಯವಹಾರ ಎಸಗಿರುವವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದರು.
(ದಟ್ಸ್ ಕನ್ನಡ ವಾರ್ತೆ)