ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬ ದೇಗುಲ
ಹಾಸನ, ಅ.18: ಶ್ರೀ ಹಾಸನಾಂಬ ದೇವರ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯ ಭಕ್ತರು ಶುಕ್ರವಾರ ದೇವಸ್ಥಾನಕ್ಕೆ ಆಗಮಿಸಿದ್ದರು. ಗುರುವಾರ ಮಧ್ಯಾಹ್ನ ದೇವಸ್ಥಾನದ ಬಾಗಿಲನ್ನು ತೆರೆಯಲಾಗಿದ್ದು ಅಕ್ಟೋಬರ್ 30ರ ಮಹಾಮಂಗಳಾರತಿಯ ನಂತರ ಬಾಗಿಲು ಮುಚ್ಚಲಾಗುತ್ತದೆ. ಪುನಃ ದೇವಸ್ಥಾನದ ಬಾಗಿಲು ತೆಗೆಯುವುದು ಮುಂದಿನ ವರ್ಷ ದೀಪಾವಳಿ ಸಮಯಕ್ಕೆ.
ಶ್ರೀ ಹಾಸನಾಂಬ ದೇವಸ್ಥಾನದ ವಿಶೇಷತೆ ಎಂದರೆ, ಒಂದು ವರ್ಷ ಕಾಲ ಬಾಗಿಲು ಮುಚ್ಚಿದ್ದರೂ ದೇವಸ್ಥಾನದಲ್ಲಿನ ದೀಪ ಪುನಃ ಬಾಗಿಲು ತೆಗೆಯುವವರೆಗೂ ಉರಿಯುತ್ತಲೇ ಇರುತ್ತದೆ. ಯಾವುದೇ ಗಾಳಿಯ ಸಂಪರ್ಕವಿಲ್ಲದಿದ್ದರೂ ದೀಪ ನಂದಿ ಹೋಗಿರುವುದಿಲ್ಲ.ಈ ಪವಿತ್ರ ದೀಪದ ದರ್ಶನ ಪಡೆಯಲು ರಾಜ್ಯದ ನಾನಾ ಮೂಲೆಗಳಿಂದ ಹಾಗೂ ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ.
ದೇವಸ್ಥಾವನ್ನು 12ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಕೃಷ್ಣಪ್ಪ ನಾಯಕ್ ಎಂಬ ಪಾಳೇಗಾರ ಈ ದೇಗುಲ ನಿರ್ಮಾಣಕ್ಕೆ ಸಹಕರಿಸಿದ್ದರು. ಹಿಂದೆ ಈ ಸ್ಥಳವನ್ನು 'ಸಿಂಹಾಸನಪುರಿ' ಎಂದು ಕರೆಯಲಾಗುತ್ತಿತ್ತು. ಹಾಸನಾಂಬ ದೇವರನ್ನು ಪ್ರತಿಷ್ಠಾಪಿಸಿದ ಬಳಿಕ ಹಾಸನ ಎಂದು ಹೆಸರಾಯಿತು.
ಪೂಜಾವಿಧಿಗಳ ಪ್ರಕಾರ ಸೋಮವಾರ ದೇವರಿಗೆ ತೊಡಿಸಿರುವ ಚಿನ್ನ ಮತ್ತು ವಜ್ರದ ಆಭರಣಗಳನ್ನು ತೆಗೆಯಲಾಗುತ್ತದೆ. ಉತ್ಸವ ಶಾಂತಿಯುತವಾಗಿ ನಡೆಯುವಂತೆ ಪೊಲೀಸರು ಬಿಗಿ ಭದ್ರತೆ ಒದಗಿಸಲಾಗಿದೆ. ದೇವಸ್ಥಾನ ಅಭಿವೃದ್ಧಿಗೆ ಸರಕಾರ ಈಗಾಗಲೇ ರು.1 ಕೋಟಿ ಬಿಡುಗಡೆ ಮಾಡಿದೆ. ಅಕ್ಟೋಬರ್ 19ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಸನಾಂಬ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ನವೀನ್ ರಾಜ್ ಸಿಂಗ್ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)