ಹೋಬಳಿ ಮಟ್ಟದಲ್ಲಿ ನೇತ್ರಚಿಕಿತ್ಸಾ ಶಿಬಿರ
ಶಿವಮೊಗ್ಗ, ಅ. 16: ಮನುಷ್ಯನ ಬದುಕಿಗೆ ಅತ್ಯಮೂಲ್ಯವಾಗಿರುವ ಕಣ್ಣಿನ ರಕ್ಷಣೆ ದೃಷ್ಠಿಯಿಂದ ಗ್ರಾಮೀಣ ಭಾಗದಲ್ಲಿ ದೃಷ್ಟಿಹೀನತೆಯಿಂದ ಬಳಲುತ್ತಿರುವವರಿಗೆ ಮರುದೃಷ್ಟಿ ಕಲ್ಪಿಸಿಕೊಡುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಹೋಬಳಿವಾರು ನೇತ್ರಚಿಕಿತ್ಸಾ ಶಿಬಿರಗಳನ್ನು ಆಯೋಜಿಸಲಾಗುವುದೆಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪ್ರಕಟಿಸಿದ್ದಾರೆ.
ಅವರು ಇಂದು ಶಿಕಾರಿಪುರ ಪಟ್ಟಣದಲ್ಲಿ ಬೆಂಗಳೂರಿನ ಪ್ರಾಜೆಕ್ಟ್ ದೃಷ್ಟಿ ಸಂಸ್ಥೆಯ ಖ್ಯಾತ ನೇತ್ರತಜ್ಞ ಡಾ.ನರಪತ್ ಸೋಳಂಕಿ ತಂಡದ ವತಿಯಿಂದ ಏರ್ಪಡಿಸಿದ್ದ ಕಣ್ಣಿನ ಉಚಿತ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಮುಂದಿನ ತಿಂಗಳಿನಿಂದಲೇ ಶಿಕಾರಿಪುರ ತಾಲ್ಲೂಕಿನಲ್ಲಿ ಹೋಬಳಿವಾರು ಶಿಬಿರಗಳನ್ನು ಹಮ್ಮಿಕೊಂಡು ತದ ನಂತರ ಜಿಲ್ಲೆಯಾದ್ಯಂತ ಶಿಬಿರಗಳನ್ನು ಆಯೋಜಿಸಲಾಗುವುದೆಂದು ಹೇಳಿದ ಮುಖ್ಯಮಂತ್ರಿಗಳು, ಜಿಲ್ಲೆಯಲ್ಲಿ 11 ಸಾವಿರ ಜನರ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಬೇಕಾಗಿದೆ. ಆದರೆ, 3,500 ಜನರ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸ ಲಾಗಿದೆ. ಇದರಿಂದಾಗಿ ನೇತ್ರ ಚಿಕಿತ್ಸಾ ಶಿಬಿರಗಳನ್ನು ತೀವ್ರಗೊಳಿಸಿ ಬಡಜನರ ಹಾಗೂ ಗ್ರಾಮೀಣ ಭಾಗದ ಜನರ ನೇತ್ರಚಿಕಿತ್ಸೆಗೆ ಅನುವುಮಾಡಿಕೊಡಲಾಗುವುದೆಂದು ಹೇಳಿದರು.
ಜೀವಿತಾವಧಿಯ ನಂತರ ಕಣ್ಣುದಾನ ಮಾಡುವುದರಿಂದ ದೃಷ್ಠಿ ಹೀನರಿಗೆ ಮರುದೃಷ್ಠಿ ಬರುವುದರಿಂದ ಪ್ರತಿಯೊಬ್ಬರು ನೇತ್ರದಾನ ಮಾಡಬೇಕೆಂದು ಹೇಳಿದರಲ್ಲದೆ, ನಾನೂ ಕೂಡ ನೇತ್ರದಾನ ಮಾಡುವುದಾಗಿ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)