ಮೈತ್ರಿ ಕುರಿತು ದೇಶಪಾಂಡೆ, ಕುಮಾರಸ್ವಾಮಿ ಚರ್ಚೆ
ಬೆಂಗಳೂರು, ಅ. 16 : ಆಡಳಿತರೂಢ ಬಿಜೆಪಿ ಪಕ್ಷವನ್ನು ಉಪಚುನಾವಣೆಯಲ್ಲಿ ಮಣಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತೆ ಒಂದಾಗುವ ಕಾಲ ಸನ್ನಿಹಿತವಾಗಿದೆ. ಮೈತ್ರಿ ಸಂಬಂಧ ಚರ್ಚಿಸಲು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಇಂದು ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಈಗಾಗಲೇ ದೂರವಾಣಿ ಮೂಲಕ ಚುನಾವಣೆ ಹೊಂದಾಣಿಕೆ ಬಗ್ಗೆ ಪ್ರಾಸ್ತಾವಿಕ ಚರ್ಚೆ ನಡೆಸಿದ್ದಾರೆ. ಇದೀಗ ಅಧಿಕೃತವಾಗಿ ಪರಸ್ಪರ ಕುಳಿತು ಸೀಟು ಹಂಚಿಕೆ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳುವ ನಿರೀಕ್ಷೆ ಇದೆ. ಅಪರೇಷನ್ ಕಮಲದ ಮೂಲಕ ತೆರವಾಗಿರುವ 7 ಹಾಗೂ ಶಾಸಕ ಸಿದ್ಧರಾಜು ನಿಧನದಿಂದ ಖಾಲಿಯಾಗಿರುವ ಮದ್ದೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಸರ್ಕಾರವನ್ನು ಭದ್ರಪಡಿಸಿಕೊಳ್ಳಲು ಬಿಜೆಪಿಗೆ ಈ ಚುನಾವಣೆ ಭಾರಿ ಪ್ರತಿಷ್ಠೆಯ ಚುನಾವಣೆಯಾಗಿದೆ. ಶತಾಯ-ಗತಾಯ ಆಡಳಿತ ಪಕ್ಷಕ್ಕೆ ನೀರು ಕುಡಿಸಬೇಕು ಎಂದು ಸೆಡ್ಡು ಹೊಡೆದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವುದರಿಂದ ಬಿಜೆಪಿ ಪಾಳೆಯದಲ್ಲಿ ಆತಂಕ ಸೃಷ್ಟಿಸಿರುವುದಂತೂ ಸುಳ್ಳಲ್ಲ.
(ದಟ್ಸ್ ಕನ್ನಡ ವಾರ್ತೆ)