ಸಚಿವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ : ಸದಾನಂದ ಗೌಡ
ಬೆಂಗಳೂರು, ಅ. 15 : ಕಾಂಗ್ರೆಸ್ ನಾಯಕರ ಮಾಡಿರುವ ಕೊಲೆ ಹಾಗೂ ಸುಳ್ಳು ಆಸ್ತಿ ಪ್ರಮಾಣಪತ್ರ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೀನುಗಾರಿಕೆ ಸಚಿವ ಆನಂದ ಅಸ್ನೋಟಿಕರ್ ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ತನಿಖೆಯ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದಗೌಡ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಅನಂದ ಅಸ್ನೋಟಿಕರ್ ಕಾಂಗ್ರೆಸ್ ನಲ್ಲಿದ್ದಾಗ ಏಕೆ ಬಾಯಿ ಮುಚ್ಚಿಕೊಂಡಿದ್ದರು ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು. ದಿಲೀಪ ನಾಯಕ ಕೊಲೆ ಪ್ರಕರಣದಲ್ಲಿ ಸಚಿವ ಆನಂದ ಅಸ್ನೋಟಿಕರ್ ಕೈವಾಡವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಸಾಕ್ಷಿ ಸಮೇತ ಬಹಿರಂಗಪಡಿಸಿದ್ದರು. ಕಳೆದ ಎರಡು ವಾರಗಳಿಂದ ಇದಕ್ಕೆ ಸಂಬಂಧಿಸಿದಂತೆ ಆರೋಪ-ಪ್ರತ್ಯಾರೋಪಗಳು ಸುರಿಮಳೆ ನಡೆದಿದೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾಡಿರುವ ಆರೋಪಿಗಳಿಗೆ ತೀಕ್ಣ ಪ್ರತಿಕ್ರಿಯ ನೀಡಿದ ಸದಾನಂದಗೌಡ, ಅನಂದ ಅಸ್ನೋಟಿಕರ್ ಕೆಪಿಸಿಸಿ ಅಧ್ಯಕ್ಷ ದೇಶಪಾಂಡೆ ಅವರ ಶಿಷ್ಯ. ಅವರು ಕಾಂಗ್ರೆಸ್ ನಲ್ಲಿದ್ದಾಗ ಸುಮ್ಮನಿದ್ದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಂಡು ಸಚಿವರಾದ ನಂತರ ಕೆದಕಿರುವ ಹುನ್ನಾರವಾದರೂ ಏನು ಎಂದು ಪ್ರಶ್ನಿಸಿದರು. ದೇಶಪಾಂಡೆ ಅವರು ಕಿರುಕುಳ ತಾರಲಾರದೆ ಕಾಂಗ್ರೆಸ್ ಪಕ್ಷದಿಂದ ಹೊರಬಂದಿರುವ ಆನಂದ ಅಸ್ನೋಟಿಕರ್ ಸತ್ಯ ಪರಿಶ್ಚಂದ್ರ ಎಂದು ಹೇಳುತ್ತಿಲ್ಲ. ತಪ್ಪಿತಸ್ಥ ಎಂದಾದಲ್ಲಿ ರಕ್ಷಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿರುವುದು ಹಾಗೂ ದಿಲೀಪ ನಾಯಕ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಗಳು ಸಾಬೀತಾದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು. ಮುಂಬರುವ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಕರಣವನ್ನು ರಾಜಕೀಕರಣಗೊಳಿಸಲು ಯತ್ನಿಸತೊಡಗಿದ್ದು, ಇದಕ್ಕೆ ಬಿಜೆಪಿ ಬಗ್ಗುವುದಿಲ್ಲ ಎಂದು ತಿರುಗೇಟು ನೀಡಿದರು.
ತನಿಖೆಗೆ ಸಿದ್ಧ : ದೇಶಪಾಂಡೆ
ವಸಂತ ಅಸ್ನೋಟಿಕರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಲಾದ ಸಾಕ್ಷಿಯ ಮಂಪರು ಪರೀಕ್ಷೆಯಲ್ಲಿ ದೇಶಪಾಂಡೆ ಅವರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಇದನ್ನು ತನಿಖೆ ನಡೆಸಬೇಕು ಎಂದು ಇತ್ತೀಚೆಗೆ ಬಿಜೆಪಿ ವಕ್ತಾರ ಧನಂಜಯ ಕುಮಾರ್ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯಿಸಿದ ದೇಶಪಾಂಡೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ನಾನು ಯಾವ ತನಿಖೆಗೆ ಬೇಕಾದರೂ ಸಿದ್ಧ. ಸರ್ಕಾರ ಕೂಡಲೇ ತನಿಖೆ ನಡೆಸಲಿ ಎಂದು ಸವಾಲಿನ ದಾಟಿಯಲ್ಲಿ ಮಾತನಾಡಿದರು. ಬಿಜೆಪಿ ವಕ್ತಾರರು ಬರೀ ಬಾಯಿ ಮಾತಿನಿಂದ ಮಾತನಾಡಿದರೆ ಸಾಲದು. ದಾಖಲೆ ಸಮೇತ ಸಾಬೀತುಪಡಿಸಲಿ, ದಾಖಲೆಗಳನ್ನು ಒದಗಿಸಲು ವಿಫಲವಾದಲ್ಲಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ದೇಶಪಾಂಡೆಯವರನ್ನು ಪರೀಕ್ಷೆಗೆ ಒಳಪಡಿಸಿ