ಐಐಟಿ ಸ್ಥಾಪಿಸಲು ಕೇಂದ್ರಕ್ಕೆ ಬಿಎಸ್ ವೈ ಪತ್ರ
ಬೆಂಗಳೂರು, ಅ.15: ಭಾರತೀಯ ತಾಂತ್ರಿಕ ಸಂಸ್ಥೆಯೊಂದನ್ನು (ಐಐಟಿ) ಕರ್ನಾಟದಲ್ಲಿ ಸ್ಥಾಪಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಐಐಟಿ ಸ್ಥಾಪಿಸುವಂತೆ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಹಲವಾರು ಬಾರಿ ಪ್ರಸ್ತಾವನೆಗಳನ್ನು ಸಲ್ಲಿಸುತ್ತಲೇ ಇದೆ. ಆದರೆ ಕೇಂದ್ರ ಸರ್ಕಾರ ಮಾತ್ರ ದಿವ್ಯ ಮೌನ ತಾಳಿದೆ. ಜುಲೈ ತಿಂಗಳಲ್ಲಿ ಯಡಿಯೂರಪ್ಪ ನವದೆಹಲಿಗೆ ಭೇಟಿ ನೀಡಿದಾಗ ಪ್ರಧಾನಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ ರಾಜ್ಯದಲ್ಲಿ ಐಐಟಿ ಸ್ಥಾಪನೆ ಕುರಿತು ಮನವಿ ಮಾಡಿಕೊಂಡಿದ್ದರು. ರಾಜ್ಯಪಾಲ ರಾಮೇಶ್ವರ್ ಠಾಕೂರ್ ಸಹ ರಾಜ್ಯಕ್ಕೆ ಐಐಟಿ ಅವಶ್ಯಕತೆ ಇದೆ ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದರು.
''ದೇಶದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದಲ್ಲಿ ಜ್ಞಾನ ಹಾಗೂ ಉನ್ನತ ಶಿಕ್ಷಣ ಆಯೋಗಗಳನ್ನು ರಚಿಸಲಾಗಿದೆ. ಇದೆಲ್ಲದರ ಸದುಪಯೋಗವಾಗಬೇಕಾದರೆ ರಾಜ್ಯಕ್ಕೆ ಐಐಟಿಯ ಅವಶ್ಯಕತೆ ಇದೆ. ಈ ಕುರಿತು ತಾವು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಮನವರಿಕೆ ಮಾಡಿಕೊಟ್ಟು, ನಮ್ಮ ಬೇಡಿಕೆಯನ್ನು ಪರಿಗಣಿಸಿ'' ಎಂದು ಯಡಿಯೂರಪ್ಪ ಪ್ರಧಾನಿಗಳಿಗೆ ಬರೆದಿರುವ ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ವಿಜ್ಞಾನ ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಿವೆ. ದೇಶದ ತಾಂತ್ರಿಕ ರಾಜಧಾನಿ ಎಂದೆನಿಸಿರುವ ಕರ್ನಾಟಕದ ಹೈಟೆಕ್ ಕ್ಷೇತ್ರದಲ್ಲಿ 100 ಕ್ಕೂ ಅಧಿಕ ಬಹುರಾಷ್ಟ್ರೀಯ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಗಳು ಹಾಗೂ ಖಾಸಗಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸಲು ಅತ್ಯುತ್ತಮ ಗುಣಮಟ್ಟದ ಮಾನವ ಸಂಪನ್ಮೂಲ ಬೇಕಾಗುತ್ತದೆ. ಈ ಎಲ್ಲ ಕಾರಣಗಳಿಗೆ ರಾಜ್ಯಕ್ಕೊಂದು ಐಐಟಿ ಅವಶ್ಯಕತೆ ಇದೆ ಎಂದು ಯಡಿಯೂರಪ್ಪ ಪ್ರಧಾನಿಗಳಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಐಐಟಿ
ಸ್ಥಾಪಿಸಲು
ಪ್ರಧಾನಿಗೆ
ಯಡಿಯೂರಪ್ಪ
ಪತ್ರ
ಬೇಸ್ನ
ದಾಖಲೆ
ಸಂಖ್ಯೆಯ
ವಿದ್ಯಾರ್ಥಿಗಳು
ಐಐಟಿಗೆ