ಮಾದೇಸ ನಿರ್ಮಾಪಕ ಮೂರ್ತಿ ಕೇರಳದಲ್ಲಿ ಬಂಧನ
ಬೆಂಗಳೂರು, ಅ. 11 : ದೇವನಹಳ್ಳಿ ಬಳಿಯ ಬಾಗಲೂರಿನಲ್ಲಿ ಸಹನಟ ವಿನೋದ್ ಎಂಬಾತನನ್ನು ಗುಂಡಿಕ್ಕಿ ಕೊಲೆಗೈದು ತಲೆಮರೆಸಿಕೊಂಡಿದ್ದ ಶಿವರಾಜ್ ಕುಮಾರ್ ನಟನೆಯ 'ಮಾದೇಸ' ಚಿತ್ರದ ನಿರ್ಮಾಪಕ ಗೋವರ್ಧನ್ ಮೂರ್ತಿಯನ್ನು ಬೆಂಗಳೂರು ಈಶಾನ್ಯ ವಲಯದ ಪೊಲೀಸರು ಕೇರಳದ ಕೊಚ್ಚಿಯ ಮನೆಯೊಂದರಲ್ಲಿ ಶನಿವಾರ ಬಂಧಿಸಿದ್ದಾರೆ.
ಗೋವರ್ಧನ್ ಮೂರ್ತಿ ಕೇರಳದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ವ್ಯವಸ್ಥಿತ ಜಾಲ ಬೀಸಿದ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಮೂರ್ತಿಯನ್ನು ಬಂಧಿಸಿದ್ದಾರೆ. ಮೂರ್ತಿಯನ್ನು ಇಂದು ನಗರಕ್ಕೆ ಕರೆತರಲಾಗುತ್ತಿದ್ದು ರಾತ್ರಿ ಅಥವಾ ಭಾನುವಾರ ಬೆಳಿಗ್ಗೆ ದಂಡಾಧಿಕಾರಿಯ ಮುಂದೆ ಹಾಜರು ಪಡಿಸಲಾಗುತ್ತಿದೆ.
ಬಾಗಲೂರಿನ ರೆಸಾರ್ಟ್ ನಲ್ಲಿ ಕುಡಿದ ಮತ್ತಿನಲ್ಲಿದ್ದ ಗೋವರ್ಧನ ಮೂರ್ತಿ ಅವರು ರಾಮು ನಿರ್ಮಾಣದ ಚಿತ್ರವೊಂದರಲ್ಲಿ ನಟಿಸುತ್ತಿದ್ದ ವಿನೋದ್ ಎಂಬಾತನ ಹೊಟ್ಟೆಗೆ ಎರಡು ಬಾರಿ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಹತ್ಯೆ ಮಾಡಿದಾಗ ಗೋವರ್ಧನ ಸೇರಿದಂತೆ ವಿನೋದ ಮತ್ತವನ ಸ್ನೇಹಿತರು ಕೂಡ ಕುಡಿದ ಮತ್ತಿನಲ್ಲಿದ್ದರು. ರಿಯಲ್ ಎಸ್ಟೇಟ್ ವ್ಯವಹಾರವನ್ನು ಕೂಡ ನಡೆಸುವ ಮೂರ್ತಿ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೊಲೆಯಲ್ಲಿ ಪರ್ಯವಸಾನವಾಗಿತ್ತು.
ಗುಂಡು ಹಾರಿದ್ದು ಆಕಸ್ಮಿಕ ಎಂದು ಗೋವರ್ಧನ ಮೂರ್ತಿ ಹೇಳಿಕೆ ನೀಡಿದ್ದರು ಮತ್ತು ಕೊಲೆ ನಡೆದ ನಂತರ ತಲೆತಪ್ಪಿಸಿಕೊಂಡಿದ್ದರು. ಆದರೆ, ವಿನೋದ್ ಜೊತೆಗಿದ್ದ ಸ್ನೇಹಿತರು ಇದು ಆಕಸ್ಮಿಕ ಘಟನೆಯಲ್ಲ ಎಂದು ವಾದಿಸಿದ್ದರು. ಈ ಸಂಬಂಧ ಪೊಲೀಸರು ಮೂರ್ತಿಯ ಕೆಲ ಸಂಬಂಧಿಗಳು ಸೇರಿದಂತೆ 15 ಜನರನ್ನು ವಿಚಾರಣೆಗೆ ಗುರಿಪಡಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ
ಓದಿಗೆ
ವ್ಯಕ್ತಿಯೊಬ್ಬನನ್ನು
ಹತ್ಯೆಗೈದ
ಮಾದೇಶ
ಚಿತ್ರ
ನಿರ್ಮಾಪಕ