ನಿರುದ್ಯೋಗಿ ಯುವಜನತೆಗಾಗಿ ಉದ್ಯೋಗ ಮೇಳ
ಬೆಂಗಳೂರು, ಅ. 11 : ಉದ್ಯೋಗ ಮತ್ತು ತರಬೇತಿ ಇಲಾಖೆಯು ನಗರದ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 18 ಮತ್ತು 19ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಎರಡು ದಿನಗಳಕಾಲ ಯುವಕ ಯುವತಿಯರಿಗೆ ಸ್ಥಳದಲ್ಲಿಯೇ ಉದ್ಯೋಗಾವಕಾಶ ಒದಗಿಸುವ ಉದ್ಯೋಗ ಮತ್ತು ಕೌಶಲ್ಯ ಮೇಳವನ್ನು ಏರ್ಪಡಿಸಿದೆ.
ಮೇಳವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಕ್ಟೋಬರ್ 18ರಂದು ಬೆಳಿಗ್ಗೆ 10 ಗಂಟೆಗೆ ಉದ್ಫಾಟಿಸಲಿದ್ದಾರೆ. ಈ ಮೇಳದಲ್ಲಿ ಬೆಂಗಳೂರಿನ ಹೆಸರಾಂತ ಸಂಸ್ಥೆಗಳು ಭಾಗವಹಿಸಲಿದ್ದು , ಅಭ್ಯರ್ಥಿಗಳನ್ನು ಸ್ಥಳದಲ್ಲಿಯೇ ಆಯ್ಕೆ ಮಾಡಲಿದ್ದಾರೆ. ಎಸ್ಎಸ್ಎಲ್, ಪಿಯುಸಿ, ಪದವೀಧರರು, ಸ್ನಾತಕೋತ್ತರ ಪದವೀಧರರು, ಐಟಿಐ ಡಿಪ್ಲೋಮಾ ಮುಂತಾದ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶಗಳಿದ್ದು, ಈ ಉದ್ಯೋಗ ಮೇಳದ ಅವಕಾಶವನ್ನು ಪಡೆದುಕೊಳ್ಳಬಹುದಾಗಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲಾ ಅರ್ಹತಾ ಪತ್ರಗಳೊಂದಿಗೆ ಅಕ್ಟೋಬರ್ 18ರಂದು 9 ಗಂಟೆಗೆ ನಗರದ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಹಾಜರಾಗಬಹುದಾಗಿದೆ.
ಇದೇ ರೀತಿಯ ಮೇಳವನ್ನು ಅಕ್ಟೋಬರ್ 15ರಂದು ಶಿವಮೊಗ್ಗ ಹಾಗೂ ಅಕ್ಟೋಬರ್ 22ರಂದು ಮಂಗಳೂರು ನಗರಗಳಲ್ಲಿ ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದು ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)