ಬೇ ಏರಿಯಾದಲ್ಲಿ ಜೋಕುಮಾರ ಸ್ವಾಮಿ ನಾಟಕ ರದ್ದು
ಬೆಂಗಳೂರು, ಸೆ. 26: ಉತ್ತರ ಕ್ಯಾಲಿಫೋರ್ನಿಯಾದ ಬೇ ಏರಿಯಾದಲ್ಲಿ ಸೆ.27ರಂದು ಪ್ರದರ್ಶನಗೊಳ್ಳಬೇಕಿದ್ದ ನಾಟಕ "ಜೋಕುಮಾರ ಸ್ವಾಮಿ" ರದ್ದಾಗಿದೆ. ರಂಗಧ್ವನಿ ತಂಡದವರು ಚಂದ್ರಶೇಖರ ಕಂಬಾರ ರಚಿಸಿರುವ ಈ ನಾಟಕವನ್ನು ಇಲ್ಲಿ ಪ್ರಸ್ತುತಪಡಿಸುವರೆಂದು ಪ್ರಕಟಣೆಯಾಗಿತ್ತು.
ನಟ ಮತ್ತು ರಂಗಧ್ವನಿ ತಂಡದ ರೂವಾರಿ ವಲ್ಲೀಶ ಶಾಸ್ತ್ರಿ ಅವರ ತುರ್ತಾಗಿ ಭಾರತಕ್ಕೆ ಮರಳಬೇಕಾದ ಸಂದರ್ಭ ತಲೆದೋರಿದ್ದರಿಂದ ನಾಟಕವನ್ನು ರದ್ದುಪಡಿಸಲಾಯಿತು ಎಂದು ರಂಗಧ್ವನಿ ತಂಡದ ಲಾಸ್ ಏಂಜಲಿಸ್ ಮೂಲಗಳು ದಟ್ಸ್ ಕನ್ನಡ ಪತ್ರಿಕೆಗೆ ತಿಳಿಸಿವೆ. ಅಮೆರಿಕದ ಕಲಾವಿದರ ತಂಡ ಮತ್ತು ನಿರ್ದೇಶಕ ನಾಗಾಭರಣ ಅವರ ತಂಡ ಜಂಟಿಯಾಗಿ ಈ ನಾಟಕವನ್ನು ಪ್ರದರ್ಶಿಸುತ್ತಿದೆ.
ವಲ್ಲೀಶ ಶಾಸ್ತ್ರಿ ಅವರ ತಂದೆ ಎಂ. ಎಸ್. ವಾಸುದೇವ ಶಾಸ್ತ್ರಿ ಅವರು ಸೆ. 17ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು. ಕೆಲಕಾಲದಿಂದ ಅಸ್ವಸ್ಥರಾಗಿದ್ದ ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಪತ್ನಿ ಮತ್ತು ವಲ್ಲೀಶ ಶಾಸ್ತ್ರಿ ಸೇರಿದಂತೆ ಮೃತರು ನಾಲಕ್ಕು ಗಂಡು ಮಕ್ಕಳು ಹಾಗೂ ನಾಲಕ್ಕು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)