ಕಲ್ಯಾಣ ಕರ್ನಾಟಕಕ್ಕೆ ಬಂಪರ್ ಕೊಡುಗೆ
ಕಲ್ಬುರ್ಗಿ, ಸೆ. 26 : ನಗರದಲ್ಲಿ 26 ವರ್ಷಗಳ ನಂತರ ಎರಡನೇ ಬಾರಿಗೆ ನಡೆದ ಬಿಜೆಪಿ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಅಭಿವೃದ್ಧಿಗೆ ಯೋಜನೆಗಳ ಮಹಾಪೂರವನ್ನೆ ಹರಿಸಿದೆ. ಹೈದರಾಬಾದ್ ಕರ್ನಾಟಕದ ಶಾಪ ವಿಮೋಚನೆ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅನೇಕ ಯೋಜನೆಗಳಿಗೆ ಸಚಿವ ಸಂಪುಟದಲ್ಲಿ ಅಂಗೀಕರಿಸಿದ್ದಾರೆ.
ಹೊಸ ಜಿಲ್ಲೆಯಾಗಿ ಯಾದಗಿರಿ : ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಸಭೆಯಲ್ಲಿ ತೆಗೆದುಕೊಳ್ಳಲಾಗಿರುವ ಮಹತ್ವದ ನಿರ್ಣಯಗಳನ್ನು ಹೇಳಿದರು. ಮುಖ್ಯವಾಗಿ ಯಾದಗಿರಿ ಜಿಲ್ಲೆಯನ್ನಾಗಿಸಬೇಕು ಎಂದು ಇಲ್ಲಿಯ ಜನರ ಅನೇಕ ದಿನಗಳ ಕೂಗು ಮತ್ತು ಕನಸನ್ನು ಬಿಜೆಪಿ ಸರ್ಕಾರ ಈಡೇರಿಸಿದೆ. ಯಾದಗಿರಿ ನಗರವನ್ನು ಜಿಲ್ಲಾ ಕೇಂದ್ರ ಮಾಡುವುದಾಗಿ ಯಡಿಯೂರಪ್ಪ ಘೋಷಿಸಿದ್ದಾರೆ. ಯಾದಗಿರಿ ಜಿಲ್ಲೆಯ ಅಭಿವೃದ್ಧಿಗೆ 50 ಕೋಟಿ ರುಪಾಯಿ ಅನುದಾನ ನೀಡಲಾಗುವುದು, ತಕ್ಷಣಕ್ಕೆ 10 ಕೋಟಿ ರುಪಾಯಿಗಳನ್ನು ಬಿಡುಗಡೆಗೆ ಆದೇಶಿಸಲಾಗಿದ್ದು, ಕಂದಾಯ ಇಲಾಖೆ ಸಚಿವರನ್ನೊಳಗೊಂಡ ಸಮಿತಿ ನೂತನ ಜಿಲ್ಲೆಯ ಅಭಿವೃದ್ಧಿ ಉಸ್ತುವಾರಿ ವಹಿಸಿಕೊಳ್ಳಲಿದೆ.
43 ನೂತನ ಯೋಜನೆಗಳಿಗೆ ಅಸ್ತು : ಬೀದರ್ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ 78 ಕೋಟಿ ರುಪಾಯಿಗಳ ಅನುದಾನ. ರಾಯಚೂರು ಜಿಲ್ಲೆಯಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ಕೇಂದ್ರಕ್ಕೆ 4 ಕೋಟಿ ರುಪಾಯಿ ಅನುದಾನ ನೀಡುವುದಾಗಿ ಹೇಳಿದರು. ಡಾ.ನಂಜುಂಡಪ್ಪ ವರದಿಯನ್ನು ಜಾರಿಗೆ ತರಲು ಮುಖ್ಯಮಂತ್ರಿಯವರನ್ನು ಒಳಗೊಂಡ ಸಮಿತಿ ರಚಿಸಲಾಗುವುದು. ಈ ಸಂಬಂಧ ಕೇಂದ್ರ ಸರ್ಕಾರದ ಬಳಿ ನಿಯೋಗ ತೆಗೆದುಕೊಂಡು ಹೋಗುವುದು ಹಾಗೂ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ 371ನೇ ವಿಧಿಗೆ ತಿದ್ದುಪಡಿ ತರುವ ಕುರಿತು ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.
ಹೈದರಾಬಾದ್ ಕರ್ನಾಟಕ ಪ್ರದೇಶದ ಆಯ್ದ 200 ಗ್ರಾಮಗಳ ಮೂಲಭೂತ ಸೌಕರ್ಯ ಸೇರಿ ಮತ್ತಿತರ ಅಭಿವೃದ್ಧಿ ಕಾರ್ಯಕ್ಕೆ ಪ್ರತಿ ಗ್ರಾಮಕ್ಕೆ ತಲಾ 1 ಕೋಟಿ ರುಪಾಯಿಯಂತೆ ಒಟ್ಟು 200 ಕೋಟಿ ರುಪಾಯಿಗಳನ್ನು ಬಿಡುಗಡೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಕೊಪ್ಪಳ ಆನೇಗುಂದಿ ಮೇಲು ಸೇತುವೆ ಕಾಮಗಾರಿಗೆ 5 ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿದೆ. ಗುಲ್ಬರ್ಗ ನಗರಕ್ಕೆ ಪ್ರತ್ಯೇಕ ಆಯುಕ್ತರ ಕಚೇರಿ, ಕೃಷ್ಣಾ, ಕಾರಂಜ, ಬೆಣ್ಣೆತೊರೆ, ಭೀಮಾ, ಅಮರ್ಜಾ, ಕಳಸಾ-ಬಂಡೂರಿ ಏತ ನೀರಾವರಿ ಸೇರಿದಂತೆ 43 ನೂತನ ಯೋಜನೆಗಳಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿತು.
ಕಲ್ಬುರ್ಗಿ ಜಿಲ್ಲೆಯ ಅಳಂದದಲ್ಲಿ ಕೇಂದ್ರಿಯ ವಿಶ್ವ ವಿದ್ಯಾಲಯ ಸ್ಥಾಪನೆಗಾಗಿ 300 ಎಕರೆ ಭೂಮಿ ಒದಗಿಸುವುದು. ಈಶಾನ್ಯ ಸಾರಿಗೆ ಸಂಸ್ಥೆ ಅಭಿವೃದ್ಧಿಗೆ 100 ಕೋಟಿ ರುಪಾಯಿ ಬಿಡುಗಡೆ, ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆಗಾಗಿ 10 ಕೋಟಿ ರುಪಾಯಿ ಬಿಡುಗಡೆ, ಬಳ್ಳಾರಿ- ಹುಬ್ಬಳ್ಳಿಯಲ್ಲಿ ಔಷಧ ಪರೀಕ್ಷಾ ಪ್ರಯೋಗಾಲಯ ಕೇಂದ್ರ ಸ್ಥಾಪನೆ, ಬಳ್ಳಾರಿ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಅಸ್ತು. ಕೊಪ್ಪಳ-ಕನಕಗಿರಿ ಏತ ನೀರಾವರಿ ಯೋಜನೆಗೆ ಸಮೀಕ್ಷೆ ನಡೆಸುವುದು. ಶೈಕ್ಷಣಿಕವಾಗಿ ಹಿಂದುಳಿದ ಶಾಲೆಗಳಿಗೆ ವಿಶೇಷ ಅನುದಾನ ನೀಡುವುದು. ಹಾಗೂ ಚಾಮರಾಜನಗರ ಜಿಲ್ಲಾಸ್ಪತ್ರೆ ಅಭಿವೃದ್ಧಿಗೆ 10 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಯಡಿಯೂರಪ್ಪ ಪ್ರಕಟಿಸಿದರು.
(ದಟ್ಸ್
ಕನ್ನಡ
ವಾರ್ತೆ)
ಪೂರಕ
ಓದಿಗೆ:
ಹೈದರಾಬಾದ್
ಕರ್ನಾಟಕಕ್ಕೆ
ನ್ಯಾಯ
ದೊರಕೀತೆ?
ಕಲ್ಯಾಣ
ನಾಡಿನಲ್ಲಿ
ಸಂಪುಟ
ಸಭೆ
ಮೆರಗು