ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯ
ನವದೆಹಲಿ, ಸೆ. 23 : ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಚರ್ಚ್ ಗಳ ಮೇಲಿನ ದಾಳಿಯನ್ನು ಖಂಡಿಸಿ ನಗರದ ರಾಜಘಾಟ್ ಬಳಿ ಇಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.
ಮಂಗಳೂರು, ದಾವಣಗೆರೆ, ಚಿಕ್ಕಮಗಳೂರು, ಕೋಲಾರ ಜಿಲ್ಲೆ ಹಾಗೂ ಬೆಂಗಳೂರು ನಗರದಲ್ಲಿ ಚರ್ಚ್ ಮೇಲೆ ದಾಳಿ ನಡೆದಿದ್ದು, ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟುಹೋಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿ ರಾಜ್ಯಕ್ಕೆ ಎದುರಾಗಿರುವುದು ವಿಷಾದನೀಯ. ಮುಂದೆ ಆಗುವ ಅನಾಹುತಗಳನ್ನು ತಡೆಯಲು ಅನ್ಯ ಮಾರ್ಗ ಕಾಣುತ್ತಿಲ್ಲ. ಆದ್ದರಿಂದ ಶೀಘ್ರದಲ್ಲಿ ಕರ್ನಾಟಕದ ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸುವಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕೇಂದ್ರ ಸರ್ಕಾರವನ್ನು ಅವರು ಒತ್ತಾಯಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಕರ್ನಾಟಕವನ್ನು ಗುಜರಾತ್ ಮಾದರಿ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದರು. ಖಂಡಿತವಾಗಿಯೂ ಅವರು ಹೇಳಿದಂತೆಯೇ ಮಾಡಿದ್ದಾರೆ ಎಂದು ಕಟುವಾಗಿ ಟೀಕಿಸಿದ ದೇವೇಗೌಡ, ಗುಜರಾತಿನಲ್ಲಿ ಅಲ್ಪಸಂಖ್ಯಾತರಿಗೆ ನೀಡುತ್ತಿರುವ ಕಿರುಕುಳ ಕರ್ನಾಟದಲ್ಲಿಯೂ ಮುಂದುವರೆದಿದೆ ಎಂದು ಆಪಾದಿಸಿದರು. ಹಾಗೂ ಚರ್ಚ್ ಮೇಲಿನ ದಾಳಿಗೆ ಪ್ರಮುಖ ಕಾರಣಿಕರ್ತರಾದ ಭಜರಂಗದಳ ಹಾಗೂ ಶ್ರೀರಾಮಸೇನೆ ಸಂಘಟನೆಗಳನ್ನು ಭಯೋತ್ಪಾದನಾ ಕೃತ್ಯದ ಅಡಿಯಲ್ಲಿ ನಿಷೇಧಿಸಬೇಕು ಎಂದು ದೇವೇಗೌಡ ಕೇಂದ್ರವನ್ನು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಎಡಪಕ್ಷಗಳು ಮುಖಂಡರು ಪಾಲ್ಗೊಂಡಿದ್ದು, ಭಾರತ ಅಮೆರಿಕ ಪರಮಾಣು ಒಪ್ಪಂದವನ್ನು ಪ್ರತಿಭಟನಾಕಾರರು ವಿರೋಧಿಸಿ ಘೋಷಣೆ ಕೂಗಿದರು.
ಹಸ್ತಾಂತರ ಬೇಡ : ಬಂಗಾರಪ್ಪ
ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಗೋಕರ್ಣ ಮಠವನ್ನು ಹಸ್ತಾಂತರಿಸಿರುವ ಕ್ರಮ ಸರಿಯಾದುದಲ್ಲ. ಇದು ಜನರನ್ನು ಹಾದಿ ತಪ್ಪಿಸುವ ಕೆಲಸವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಕಿಡಿಕಾರಿದ್ದಾರೆ. ಮಠಗಳ ಹಸ್ತಾಂತರ ವಿಷಯದಲ್ಲಿ ಸರ್ಕಾರ ಸಂಪೂರ್ಣ ತಪ್ಪು ಹೆಜ್ಜೆ ಇರಿಸಿದ್ದು, ಯಾವ ಪುರುಷಾರ್ಥಕ್ಕೆ ಹಸ್ತಾಂತರ ಮುಂದಾಗಿದೆ ಎಂದು ಪ್ರಶ್ನಿಸಿದ ಅವರು, ಹಸ್ತಾಂತರಕ್ಕೆ ಸರ್ಕಾರ ಕಾರಣ ನೀಡಬೇಕು ಎಂದು ಆಗ್ರಹಿಸಿದರು.
ಚರ್ಚ್ ಮೇಲಿನ ದಾಳಿಯನ್ನು ಬಲವಾಗಿ ಖಂಡಿಸಿದ ಅವರು, ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ಸೋತಿದೆ. ಸದ್ಯದ ಪರಿಸ್ಥಿತಿ ಅವಲೋಕಿಸುವುದಾದರೆ, ರಾಜ್ಯಕ್ಕೆ ರಾಷ್ಟ್ರಪತಿ ಆಳ್ವಿಕೆ ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು,
(ದಟ್ಸ್ ಕನ್ನಡ ವಾರ್ತೆ)
ಬಿಜೆಪಿ
ವೈಫಲ್ಯ
ವಿರೋಧಿಸಿ
ಜೆಡಿಎಸ್
ಪ್ರತಿಭಟನೆ
ರಾಜ್ಯದಲ್ಲಿ
355
ನೇ
ವಿಧಿ
ಜಾರಿ
ಸಂಭವ
?
ಬಿಜೆಪಿ
ಸರ್ಕಾರ
ವಜಾಕ್ಕೆ
ದೇವೇಗೌಡರ
ಒತ್ತಾಯ