ಪದ್ಮನಾಭನಗರ ಅಭಿವೃದ್ಧಿಗೆ 100 ಕೋಟಿ ರು. ಯೋಜನೆ
ಮಂಗಳವಾರ ಯಡಿಯೂರು ಆಟದ ಮೈದಾನದಲ್ಲಿ ವೃದ್ಧರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಮಾಸಾಶನ ನೀಡುವ ಜನಸ್ಪಂದನ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಮಾಸಾಶನ ಮಂಜೂರಾತಿ ಪತ್ರಗಳನ್ನು ವಿತರಿಸಿ ಮಾತನಾಡುತ್ತಿದ್ದ ಸಚಿವರು, ಯಡಿಯೂರು ಕೆರೆ ಮತ್ತು ಉದ್ಯಾನವನವನ್ನು ಅಭಿವೃದ್ಧಿಗೊಳಿಸಿ ಕಾರಂಜಿಯನ್ನು ಅಳವಡಿಸಿ ಸುಂದರ ತಾಣವನ್ನಾಗಿ ಮಾಡಲಾಗುವುದೆಂದು ತಿಳಿಸಿದರು.
ಕೊಟ್ಟ ಮಾತಿನಂತೆ ಸರ್ಕಾರ ಜನರ ಸಂಕಷ್ಟ ಬಗೆಹರಿಸಲು ಅವರ ಮನೆ ಬಾಗಿಲಿಗೇ ಬಂದಿದೆ. ಮಾಸಾಶನ ಸೌಲಭ್ಯ ಎಲ್ಲ ಅರ್ಹ ವ್ಯಕ್ತಿಗಳಿಗೂ ದೊರೆಯುವಂತಾಗಲೂ ನೆರೆಹೊರೆಯವರಿಗೆ ತಿಳಿಸುವಂತೆ ಫಲಾನುಭವಿಗಳಲ್ಲಿ ಮನವಿ ಮಾಡಿದ ಸಚಿವರು ಜನಸ್ಪಂದನ ಕಾರ್ಯಕ್ರಮವನ್ನು ಆರು ತಿಂಗಳಿಗೊಮ್ಮೆ ನಡೆಸಲಾಗುವುದೆಂದು ತಿಳಿಸಿದರು.
ಮು೦ದಿನ ಜನಸ್ಪಂದನ ಕಾರ್ಯಕ್ರಮಗಳಲ್ಲಿ ಗುಡಿಸಲು ನಿವಾಸಿಗಳಿಗೆ ಹಕ್ಕು ಪತ್ರವನ್ನು, ಭಾಗ್ಯಲಕ್ಷ್ಮೀ ಯೋಜನೆಯಡಿ ಹೆಣ್ಣುಮಗವಿನ ಹೆಸರಿನಲ್ಲಿ 1 ಲಕ್ಷ ರು. ಬಾಂಡ್ ಹಾಗೂ ಮಡಿಲು ಯೋಜನೆಯಡಿ ತಾಯಂದಿರಿಗೆ ಸಹಾಯಧನ ನೀಡಲು ಕ್ರಮ ಕೈಗೊಳ್ಳಲಾಗುವುದೆಂದು ಸಚಿವರು ಹೇಳಿದರು.
ವಿಶೇಷ ಜಿಲ್ಲಾಧಿಕಾರಿ ರಾಮಾಂಜನೇಯ, ವಿವಿಧ ಇಲಾಖೆಯ ಅಧಿಕಾರಿಗಳು, ಸಮಾಜ ಸೇವಾಕರ್ತ ಲಕ್ಮೀಕಾಂತ್ ಹಾಗೂ ಇನ್ನಿತರರು ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ನೀಡುವ ಕಾರ್ಯದಲ್ಲಿ ಭಾಗಿಯಾಗಿದ್ದರು.
(ದಟ್ಸ್ ಕನ್ನಡ ವಾರ್ತೆ)