2 ಪಶುವೈದ್ಯಕೀಯ ಕಾಲೇಜು ಮುಚ್ಚಲು ಸೂಚನೆ
ಬೆಂಗಳೂರು, ಸೆ.22: ಬೋಧನಾ ಸಿಬ್ಬಂದಿ ಹಾಗೂ ಮೂಲ ಸೌಕರ್ಯಗಳ ಕೊರತೆಯ ಎದುರಿಸುತ್ತಿರುವ ಕರ್ನಾಟಕದ ಎರಡು ಪಶುವೈದ್ಯಕೀಯ ಕಾಲೇಜುಗಳನ್ನು ಮುಚ್ಚುವಂತೆ ಭಾರತೀಯ ಪಶುವೈದ್ಯಕೀಯ ಸಮಿತಿ(ವಿಸಿಐ) ಸೂಚಿಸಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗ ಹಾಗೂ ಹಾಸನದ ಪಶುವೈದ್ಯಕೀಯ ಕಾಲೇಜುಗಳನ್ನು ಮುಚ್ಚಲು ವಿಸಿಐ ಆದೇಶಿಸಿದೆ. ಈ ಎರಡು ಕಾಲೇಜುಗಳಿಗೆ ವಿಸಿಐ ತಂಡ ಜುಲೈ ತಿಂಗಳಲ್ಲಿ ಭೇಟಿ ನೀಡಿ ಪರಿಶೀಲಿಸಿದಾಗ ವಿಸಿಐ ಮಾರ್ಗದರ್ಶನ ಸೂತ್ರಗಳನ್ನು ಅನುಸರಿಸುವಲ್ಲಿ ಈ ಎರಡು ಕಾಲೇಜುಗಳು ವಿಫಲಾಗಿದ್ದವು. ಈ ಪಶುವೈದ್ಯಕೀಯ ಕಾಲೇಜುಗಳಲ್ಲಿ ಬೋಧನಾ ಸಿಬ್ಬಂದಿ ಹಾಗೂ ಮೂಲ ಸೌಕರ್ಯಗಳ ಕೊರತೆಗಳು ಎದ್ದು ಕಾಣಿಸುತ್ತಿದ್ದವು.
ಈ ಶೈಕ್ಷಣಿಕ ವರ್ಷದಲ್ಲಿ ಯಾವುದೇ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಾರದು ಎಂದು ವಿಸಿಐ ಈ ಕಾಲೇಜುಗಳಿಗೆ ನಿರ್ದೇಶಿಸಿದೆ. 2006 ಮತ್ತು 2007ನೇ ಸಾಲಿನಲ್ಲಿ ಕ್ರಮವಾಗಿ ಹಾಸನ ಹಾಗೂ ಶಿವಮೊಗ್ಗ ಪಶುವೈದ್ಯಕೀಯ ಕಾಲೇಜುಗಳು ಸ್ಥಾಪನೆಯಾಗಿದ್ದವು. ಪ್ರತಿ ಕಾಲೇಜಿನಲ್ಲಿ ತಲಾ 30 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಸೂಚಿಸಲಾಗಿತ್ತು.
ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯ ಮೂಲಗಳ ಪ್ರಕಾರ, ರಾಜ್ಯದಲ್ಲಿರುವ ನಾಲ್ಕು ಪಶುವೈದ್ಯಕೀಯ ಕಾಲೇಜುಗಳು ಬೋಧನಾ ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ಬಹಳಷ್ಟು ದಿನಗಳಿಂದ ಈ ಎರಡು ಕಾಲೇಜುಗಳು ಬೋಧನ ಸಿಬ್ಬಂದಿಯ ತೀವ್ರ ಕೊರತೆ ಎದುರಿಸುತ್ತಿವೆ. ಪ್ರಸ್ತುತ ರಾಜ್ಯದ ನಾಲ್ಕು ಪಶುವೈದ್ಯಕೀಯ ಕಾಲೇಜಿನ 22 ಇಲಾಖೆಗಳಲ್ಲಿ 240 ಮಂದಿ ಬೋಧನಾ ಸಿಬ್ಬಂದಿ ಇದ್ದಾರೆ. ಆದರೆ 600 ಸಿಬ್ಬಂದಿಯ ಅವಶ್ಯಕತೆ ಇದೆ. ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬುವರೆಗೂ ಹೊಸ ನೇಮಕಾತಿ ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿರುವುದರಿಂದ ಪಶುವೈದ್ಯಕೀಯ ವಿಶ್ವವಿದ್ಯಾಲಯ ಹೊಸ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದೆ ಇತ್ತ ಸಮಸ್ಯೆಯನ್ನು ಪರಿಹರಿಸಲಾಗದಂತಹ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದೆ.
ಕಟ್ಟಡ ನಿರ್ಮಾಣ, ಪ್ರಯೋಗಾಲಯ ಇನ್ನಿತರ ಮೂಲ ಸೌಲಭ್ಯಗಳಿಗಾಗಿ ರಾಜ್ಯ ಸರ್ಕಾರ ಶಿವಮೊಗ್ಗ ಹಾಗೂ ಹಾಸನ ಕಾಲೇಜುಗಳಿಗೆ 1 ಕೋಟಿ ರು.ಗಳನ್ನು ಬಿಡುಗಡೆ ಮಾಡಿತ್ತು. ಆದರೂ ವಿಸಿಐನ ಮಾರ್ಗದರ್ಶನ ಸೂತ್ರಗಳನ್ನು ಪೂರೈಸಲು ಸಾಧ್ಯವಾಗಿಲ್ಲ. ಈ ಕಾಲೇಜುಗಳು ಮುಚ್ಚುವ ಸ್ಥಿತಿ ತಲೆದೋರಿದ್ದರೆ, ಸರ್ಕಾರ ಮತ್ತೆರಡು ಹೊಸ ಹೈನುಗಾರಿಕೆ ಕಾಲೇಜುಗಳನ್ನು ಗುಲ್ಬರ್ಗ ಹಾಗೂ ರಾಯಚೂರಿನಲ್ಲಿ ಹಾಗೂ ಮೀನುಗಾರಿಕೆ ಕಾಲೇಜನ್ನು ಕಾರವಾರದಲ್ಲಿ ಸ್ಥಾಪಿಸಲು ಹೊರಟಿದೆ.
(ದಟ್ಸ್ ಕನ್ನಡ ವಾರ್ತೆ)