ನಶಿಸುವ ಭಯದಲ್ಲಿ ಮಂಗಳೂರಿನ ಎಮ್ಮೆಕೆರೆ
ಮಂಗಳೂರು, ಸೆ.22: ನಗರದ ಹೊಯ್ಗೆ ಬಜಾರ್ ವಾರ್ಡ್ ನಲ್ಲಿರುವ ಪ್ರಸಿದ್ಧ ಎಮ್ಮೆ ಕೆರೆ ನಾಮಾವಶೇಷವಾಗಲಿದೆಯೇ? ಈ ಕುರಿತು ಒಂದು ವಸ್ತುನಿಷ್ಠ ವರದಿ.
ಒಂದು ಕಾಲದಲ್ಲಿ ಎಮ್ಮೆಕೆರೆ ಬೋಳಾರ್ ಮತ್ತು ಪಾಂಡೇಶ್ವರ್ ಪ್ರದೇಶದ ಹೊಲಗಳಿಗೆ ಜೀವನಾಧಾರವಾಗಿತ್ತು. ಈ ಪ್ರದೇಶದಲ್ಲಿ ಕೆರೆ ಇದ್ದ ಕಾರಣ ಎಷ್ಟೇ ಮಳೆಬಿದ್ದರೂ ನೀರು ಮನೆಗಳಿಗೆ ನುಗ್ಗುತ್ತಿರಲಿಲ್ಲ. ನಿಧಾನಕ್ಕೆ ಕೆರೆಯ ಭಾಗ ಕರಗುತ್ತಾ, ಹೊಸಹೊಸ ಕಟ್ಟಡಗಳು ಕೆರೆಗೆ ತೀರ ಹತ್ತಿರವಾಗಿ ಎದ್ದು ನಿಂತವು ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಈಗ ಮಳೆ ಸ್ವಲ್ಪ ಹೆಚ್ಚಾದರೆ ಸಾಕು ಮನೆಗಳಿಗೆಲ್ಲಾ ನೀರು ನುಗ್ಗುತ್ತದೆ. ಮೀನುಗಾರಿಕೆ ಇಲಾಖೆ ಈ ಕೆರೆಯಲ್ಲಿ ಕೆಲವೊಂದು ಅಪರೂಪದ ಮೀನುಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಆದರೆ ಈಗ ಹೂಳು ಹಾಗೂ ಕಳೆ ಕೆರೆಯನ್ನು ಆಕ್ರಮಿಸಿರುವ ಕಾರಣ ನೀರಿನಲ್ಲಿನ ಜೀವಜಾಲ ಉಸಿರುಗಟ್ಟುವ ಪರಿಸ್ಥಿತಿಯಲ್ಲಿದೆ.
ಕೆರೆಯ ಮೂರನೆ ಒಂದು ಭಾಗದಲ್ಲಿ ನೀರಿದ್ದು ಉಳಿದ ಭಾಗದಲ್ಲಿ ಕಟ್ಟಡ ನಿರ್ಮಾಣದ ವ್ಯರ್ಥ ವಸ್ತುಗಳು, ಕಸಕಡ್ಡಿ, ಮಣ್ಣು ಮಡ್ಡಿಯಲ್ಲ ಸೇರಿ ಕೆರೆ ಕೃಶವಾಗಿ ಪ್ರಸ್ತುತ ಅದು ಕ್ರೀಡಾಂಗಣವಾಗಿ ಬದಲಾಗಿದೆ. ಕಟ್ಟಡ ನಿರ್ಮಾಣದ ಕಸ ಕೆರೆಗೆ ತಂದು ಸುರಿಯುತ್ತಿದ್ದ ಕಾರಣ ಎಮ್ಮೆಕೆರೆಯ 3.63 ಎಕರೆಗಳಷ್ಟು ಜಾಗ ಹಾಳಾಗಿದೆ. ಕಸಕಡ್ಡಿ ತಂದು ಸುರಿಯುವ ಕಾರ್ಯ 1983ರಿಂದಲೂ ನಿರಂತರವಾಗಿ ನಡೆಯುತ್ತ ಬಂದಿದೆ ಎನ್ನುತ್ತಾರೆ ಅಲ್ಲೇ ಸನಿಹದಲ್ಲಿರುವ ಮಾಜಿ ಕೌನ್ಸಿಲರ್ ಮುರಳಿಧರ ಬೋಳಾರ್. ತಾವು ಅಧಿಕಾರದಲ್ಲಿದ್ದಾಗ ಕೆರೆಗೆ ವ್ಯರ್ಥಗಳನ್ನು ಸುರಿಯುವವರ ವಿರುದ್ಧ ಕ್ರಮಕೈಗೊಳ್ಳುತ್ತಿದ್ದೆ. ಆದರೆ ಈಗಿನ ಅಧಿಕಾರಿಗಳು ಈ ಬಗ್ಗೆ ಗಮನ ಕೊಡುತ್ತಿಲ್ಲ ಎನ್ನುತ್ತಾರೆ ಬೋಳಾರ್.
ಕೆರೆಯ ಸುತ್ತಮುತ್ತಲು ಇರುವ ಕೆಲ ಮಂದಿ ತಂತಮ್ಮ ಮನೆಗಳಿಗೆ ಒಳದಾರಿ, ಸೀಳು ದಾರಿಗಳನ್ನು ಸಹ ಮಾಡಿಕೊಂಡಿದ್ದಾರೆ. ಇದು ಹೀಗೆ ಮುಂದುವರಿದರೆ ಮುಂದೊಂದು ದಿನಎಮ್ಮೆಕೆರೆ ಮಾಯವಾಗಲಿದೆ. ಈಗಾಗಲೇ ಅರಕೆರೆ, ತಾವರೆಕೆರೆ, ಓಣಿಕೆರೆಗಳು ನಾಮಾವಶೇಷವಾಗಿವೆ. ಮಹಾಕಲಿಪಾಡು ಬಳಿ ಇರುವ ಮೊಯ್ಲಕೆರೆ, ಜೀಪು ಬಳಿ ಇರುವ ಗುಜ್ಜಾರಕೆರೆಯ ಪರಿಸ್ಥಿತಿ ಸಹ ಎಮ್ಮೆಕೆರೆಗಿಂತ ಭಿನ್ನವಾಗಿಲ್ಲ. ಪಾಡಿ ಬಳಿ ಇರುವ ಬೈಕಾಡಿ ಕೆರೆ ಹಾಗೂ ಕವೂರು ಕೆರೆಗಳನ್ನು ಸರ್ಕಾರ ಸಂರಕ್ಷಿಸಿ ಅಭಿವೃದ್ಧಿ ಪಡಿಸಿದೆಆದರೆ ಗುಜ್ಜಾರಕೆರೆ ಬಗ್ಗೆ ಪಾಲಿಕೆ ಗಮನಹರಿಸುತ್ತಿಲ್ಲ ಎನ್ನುತ್ತಾರೆ ಗುಜ್ಜಾರಕೆರೆ ತೀರ್ಥ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಕೊಠಾರಿ.
(ದಟ್ಸ್ ಕನ್ನಡ ವಾರ್ತೆ)