ಗಂಗೊಂಡನಹಳ್ಳಿಯಲ್ಲಿ ಅಘೋಷಿತ ಬಂದ್ ಸ್ಥಿತಿ
ಬೆಂಗಳೂರು, ಸೆ. 22 : ಗಣೇಶಮೂರ್ತಿ ವಿಸರ್ಜನೆಯ ಮೆರವಣಿಗೆ ಸಂದರ್ಭದಲ್ಲಿ ಎರಡು ಕೋಮಿನ ನಡುವೆ ಭಾನುವಾರ ರಾತ್ರಿ ಉಂಟಾದ ಘರ್ಷಣೆಯಲ್ಲಿ ತ್ವೇಷಮಯವಾಗಿದ್ದ ಗಂಗೊಂಡನಹಳ್ಳಿಯಲ್ಲಿ ಇಂದು ಕೂಡಾ ಉದ್ರಿಕ್ತ ಪರಿಸ್ಥಿತಿ ಮುಂದುವರೆದಿದೆ. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಅಂಗಡಿ ಮುಂಗಟ್ಟುಗಳು ಮುಚ್ಚಲಾಗಿದ್ದು, ಅಘೋಷಿತ ಬಂದ್ ವಾತಾವರಣ ಕಂಡು ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಮೂರು ದಿನಗಳ ಕಾಲ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಘಟನೆಯ ಹಿನ್ನೆಲೆ
ಗಣೇಶನನ್ನು ಮೆರವಣಿಗೆ ಮಾಡುತ್ತಿದ್ದ ಗುಂಪು ಬೇರೆ ಕೋಮಿನವರು ವಾಸಿಸುತ್ತಿರುವ ಬೀದಿಯಲ್ಲಿ ಮೆರವಣಿಗೆ ಸಾಗಬೇಕು ಎಂದು ಹಠ ಹಿಡಿದರು. ಇದಕ್ಕೂ ಮುಂಚೆ ಆ ಸ್ಥಳದಲ್ಲಿ ಎರಡು ಕೋಮಿನ ನಡುವೆ ಗಲಾಟೆ ಆಗಿದ್ದರಿಂದ ಪೊಲೀಸರು ಅಲ್ಲಿ ಮೆರವಣಿಗೆ ಮಾಡಲು ಅವಕಾಶ ನೀಡಲಿಲ್ಲ. ಪಟ್ಟು ಬಿಡದ ಗುಂಪು ಗಣೇಶನನ್ನು ಬೇರೆ ಕೋಮಿನವರ ಬೀದಿಯಲ್ಲಿ ಮೆರವಣಿಗೆ ಮಾಡಲು ಮುಂದಾದಾಗ ಪೊಲೀಸರು ಗುಂಪು ಚದುರಿಸಲು ಲಾಠಿ ಪ್ರಹಾರ ನಡೆಸಿದರು. ಹೀಗಾಗಿ ಗಣೇಶ ವಿಸರ್ಜನೆ ಮಾಡುವವರು ಚೆಲ್ಲಾಪಿಲ್ಲಿಯಾಗಿದ್ದರಿಂದ ಪೊಲೀಸರೇ ಗಣೇಶನ ವಿಸರ್ಜನೆಯನ್ನು ಮಾಡಿದ್ದರು. ಘಟನೆಯಲ್ಲಿ ಮೂವರಿಗೆ ಗಾಯವಾಗಿತ್ತು.
ಇಂದು ಬೆಳಗ್ಗೆ ಕೂಡ ಗಂಗೊಂಡನಹಳ್ಳಿಯಲ್ಲಿ ಉದ್ವಿಗ್ನ ವಾತಾವರಣ ಮುಂದುವರೆದಿದೆ. ಹಿರಿಯ ಪೊಲೀಸ್ ಅಧಿಕಾರಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)