ಭಜರಂಗದಳಕ್ಕೆ ಪರ್ಯಾಯ ಸಂಘಟನೆ ರಚನೆ
ಮಂಗಳೂರು, ಸೆ. 19 : ಮಂಗಳೂರಿನಲ್ಲಿ ನಡೆದಿರುವ ಕೋಮು ಗಲಭೆ ಅತ್ಯಂತ ಖಂಡನೀಯ ಕೃತ್ಯ. ಅಕ್ಷಮ್ಯ ಅಪರಾಧ. ಅಲ್ಪಸಂಖ್ಯಾತರ ರಕ್ಷಣೆಗಾಗಿ ಭಜರಂಗದಳಕ್ಕೆ ಪರ್ಯಾಯವಾಗಿ ರಾಷ್ಟ್ರದಲ್ಲಿರುವ ಕ್ರಿಶ್ಚಿಯನ್ನರನ್ನು ಒಗ್ಗೂಡಿಸಿ 'ಯುನೈಟೆಡ್ ವಾಯ್ಸ್ ಆಫ್ ಕ್ರಿಶ್ಚಿಯನ್' ಎಂಬ ಸಂಘಟನೆಯನ್ನು ರಚಿಸುವುದಾಗಿ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವಾ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಮಂಗಳೂರಿನಲ್ಲಿ ದಾಳಿಗೊಳಗಾದ ಚರ್ಚ್ ಗಳ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಭಜರಂಗದಳದ ಮುಖಂಡನನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು. ದೇಶದಲ್ಲಿ ನಿರಂತರವಾಗಿ ಕ್ರೈಸ್ತರ ಮೇಲೆ ದಾಳಿ ನಡೆಯುತ್ತಲೇ ಇದೆ. ಕಳೆದ ತಿಂಗಳು ಒರಿಸ್ಸಾದಲ್ಲಿ ನಡೆಯಿತು, ಇಂದು ಮಂಗಳೂರಿನಲ್ಲಿ ದಾಳಿ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಇತಿಹಾಸ ಕೆದಕಿ ನೋಡಿ, ಕ್ರೈಸ್ತ ಸಮುದಾಯ ಎಂದಾದರೂ ಹಿಂಸಾತ್ಮಕ ರೀತಿಯಲ್ಲಿ ವರ್ತಿಸಿದೆಯಾ ಎಂದು ಕಿಡಿಕಾರಿದರು. ಇಷ್ಟಾದರೂ ಕೂಡಾ ಮುಗ್ಧರ ಮೇಲೆ ದಾಳಿ ಏಕೆ ಎಂದು ಅವರು ಪ್ರಶ್ನಿಸಿದರು.
ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರ ಉದ್ದೇಶಪೂರ್ವಕವಾಗಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಲು ಕುಮ್ಮಕ್ಕು ನೀಡುತ್ತಿದೆ. ಮುಂದಿನ ಲೋಕಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ಹಿಂದುಗಳ ಭಾವನೆಗಳನ್ನು ಕೆರಳಿಸಿ ಮತ ಗಳಿಸುವ ಹುನ್ನಾರ ಅಡಗಿದೆ ಎಂದು ಆರೋಪಿಸಿದರು.
ಮಂಗಳೂರು ಗಲಭೆ ಸರ್ಕಾರದ ಮೂಗಿನ ಕಳೆಗೆ ನಡೆದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಗಲಭೆಗೆ ಕಾರಣಿಕರ್ತನಾಗಿರುವ ಭಜರಂಗದಳದ ನಾಯಕನನ್ನು ಬಂಧಿಸಲು ಏಕೆ ಮುಂದಾಗಿಲ್ಲ ಎಂದು ಪ್ರಶ್ನಿಸಿದರು. ಒಟ್ಟಿನಲ್ಲಿ ರಾಜ್ಯದಲ್ಲಿರುವ ಅಲ್ಪಸಂಖ್ಯಾತರು ಭಯದ ನೆರಳಲ್ಲಿ ಜೀವಿಸುತ್ತಿದ್ದಾರೆ. ಕಳೆದ ಮೂರು ತಿಂಗಳಿಂದ ರಾಜ್ಯದಲ್ಲಿ ಉಸಿರು ಕಟ್ಟುವ ವಾತಾವರಣ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದ್ದರಿಂದ ಬಹುಸಂಖ್ಯಾತರಿಂದ ರಕ್ಷಿಸಿಕೊಳ್ಳಲು ದೇಶದ ಕ್ರಿಶ್ಚಿಯನ್ನರು ಒಟ್ಟುಗೂಡಿಸಿ 'ಯುನೈಟೆಡ್ ವಾಯ್ಸ್ ಆಫ್ ಕ್ರಿಶ್ಚಿಯನ್' ಸಂಘಟನೆ ರಚಿಸುವುದಾಗಿ ಹೇಳಿದರು.
(ದಟ್ಸ್
ಕನ್ನಡ
ವಾರ್ತೆ)
ಧೈರ್ಯವಿದ್ದರೆ
ಸಂಘಪರಿವಾರವನ್ನು
ನಿಷೇಧಿಸಿ
ಭಜರಂಗದಳ
ಮುಖಂಡನ
ಬಂಧನಕ್ಕೆ
ಆಗ್ರಹ