ಧೈರ್ಯವಿದ್ದರೆ ಸಂಘಪರಿವಾರವನ್ನು ನಿಷೇಧಿಸಿ : ನಾಯ್ಡು
ವಿಜಯವಾಡ, ಸೆ. 19 : ಸಂಘ ಪರಿವಾರವನನ್ನು ನಿಷೇಧಿಸುವ ತಾಕತ್ತು ಕೇಂದ್ರ ಸರ್ಕಾರಕ್ಕೆ ಇದೆಯೇ, ದೈರ್ಯವಿದ್ದರೆ ಅಂತಹ ಸಾಹಸಕ್ಕೆ ಕೈಹಾಕಲಿ ನೋಡೋಣ ಎಂದು ಬಿಜೆಪಿ ಹಿರಿಯ ನಾಯಕ ವೆಂಕಯ್ಯ ನಾಯ್ಡು ಯುಪಿಎ ಸರ್ಕಾರ ಸವಾಲು ಹಾಕುವ ರೀತಿಯಲ್ಲಿ ಮಾತನಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಹಿಂದೂಸ್ತಾನದಲ್ಲಿ ಹಿಂದುಪರ ಸಂಘಟನೆಗಳನ್ನು ನಿಷೇಧಿಸಲು ಸರ್ಕಾರ ಮುಂದಾದರೆ. ಗಂಭೀರ ಪರಿಣಾಮದ ಜತೆಗೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದರು. ಕಳೆದ ಮಂಗಳವಾರ ಕಾಂಗ್ರೆಸ್ ಮುಖಂಡ ಹಾಗೂ ಕೇಂದ್ರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಎಂ. ವೀರಪ್ಪ ಮೂಯ್ಲಿ ಅವರು, ಮಂಗಳೂರು ಗಲಭೆಗೆ ಕಾರಣವಾಗಿರುವ ಭಜರಂಗದಳವನ್ನು ನಿಷೇಧಿಸಲು ಕೇಂದ್ರ ಮುಂದಾಗಬೇಕಾಗುತ್ತದೆ ಎನ್ನುವ ಹೇಳಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಮತ್ತು ಒರಿಸ್ಸಾದಲ್ಲಿ ಅಲ್ಪಸಂಖ್ಯಾತರ ಚರ್ಚ್ ಹಾಗೂ ಅಮಾಯಕರ ಮೇಲಿನ ದಾಳಿ ಖಂಡನೀಯ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇ ಬೇಕು ಎನ್ನುವುದು ಬಿಜೆಪಿ ಪಕ್ಷದ ನಿಲುವು ಕೂಡ ಅದೇ ಆಗಿದೆ. ಆದರೆ, ರಾಜಕೀಯ ಲಾಭಕ್ಕಾಗಿ, ಅಲ್ಪಸಂಖ್ಯಾತರ ಓಲೈಕೆಗಾಗಿ ಸಂಘ ಪರಿವಾರವನ್ನು ನಿಷೇಧಿಸುವ ಉದ್ಧಟತನದ ಹೇಳಿಕೆ ನೀಡುವುದು ಅಕ್ಷಮ್ಯ. ಕಾಂಗ್ರೆಸ್ ಮುಖಂಡರು ಇಂತಹ ಹೇಳಿಕೆ ನೀಡುವುದನ್ನು ಕೈಬಿಟ್ಟರೆ ಉತ್ತಮ ಎಂದು ಕಿವಿ ಮಾತು ಹೇಳಿದರು.
ನ್ಯೂಲೈಫ್ ಎಂಬ ಕ್ರಿಶ್ಚಿಯನ್ ಸಂಸ್ಥೆ ಕರ್ನಾಟಕದಲ್ಲಿ ಮತಾಂತರ ಮಾಡುತ್ತಿರುವುದು ಸತ್ಯ. ಆ ಸಂಸ್ಥೆಗೆ ವಿದೇಶದಿಂದ ಹಣ ಹರಿದುಬರುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇಂತಹ ಸಂಸ್ಥೆಗಳನ್ನು ನಿಷೇಧಿಸುವ ಚಿಂತನೆ ನಡೆಸಬೇಕಾಗಿದೆ. ಕೇಂದ್ರ ಸರ್ಕಾರ ಐಎಸ್ ಐ ಸಂಸ್ಥೆಯ ಮೇಲೆ ಮೃದುಧೋರಣೆ ಹೊಂದಿದ್ದರಿಂದ ಇಂದು ದೇಶ ತುಂಬೆಲ್ಲಾ ಉಗ್ರರ ಅಟ್ಟಹಾಸ ಮುಂದುವರೆದಿದೆ. ಉಗ್ರರನ್ನು ತಡೆಗಟ್ಟುವ ನಿಟ್ಟಿನಲ್ಲಿ ನೂತನ ಕಾಯ್ದೆ ತರುವ ಕುರಿತು ಚರ್ಚಿಸಬೇಕಾದ ಸಂದರ್ಭದಲ್ಲಿ ಸಂಘ ಪರಿವಾರವನ್ನು ನಿಷೇಧಿಸುವ ಕುರಿತು ಮಾತನಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಉಗ್ರರಿಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ದೇಶ ದೊಡ್ಡ ಗಂಡಾಂತರ ಎದುರಿಸಬೇಕಾದಿತು ಎಂದು ಎಚ್ಚರಿಕೆ ನೀಡಿದರು. ಚರ್ಚ್ ಮೇಲೆ ದಾಳಿ ನಡೆಸಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಲಹೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)