ಉಗ್ರರ ದಮನಕ್ಕೆ ಸಚಿವ ಸಂಪುಟ ಸಭೆ
ನವದೆಹಲಿ, ಸೆ. 17 : ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ವಿಧ್ವಂಸಕ ಕೃತ್ಯಗಳ ಕುರಿತು ಚರ್ಚೆ. ನೂತನ ಭಯೋತ್ಪಾದನಾ ನಿಗ್ರಹ ಕಾಯ್ದೆ ರಚನೆ ಹಾಗೂ ದೇಶದ ಭದ್ರತೆ ಕಾಪಾಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಇಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಕೇಂದ್ರ ಸಚಿವ ಸಂಪುಟ ಸಭೆಯನ್ನು ಕರೆದಿದ್ದಾರೆ. ಕೇಂದ್ರದ ಅಡಳಿತ ಸುಧಾರಣಾ ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ ಸಮಿತಿ ನೀಡಿರುವ ವರದಿಯ ಸಮಗ್ರ ಚರ್ಚೆ ಇಂದಿನ ಸಭೆಯಲ್ಲಿ ನಡೆಯಲಿದೆ ಎನ್ನಲಾಗಿದೆ.
ದೇಶದಲ್ಲಿ ಇತ್ತೀಚೆಗೆ ನಡೆದಿರುವ ಭಯೋತ್ಪಾದನಾ ಕೃತ್ಯಗಳು ಸಂಪುಟ ಸಭೆ ಪ್ರಮುಖ ಚರ್ಚೆ ವಿಷಯವಾಗಿದೆ. ಉಗ್ರರ ಅಟ್ಟಹಾಸವನ್ನು ನಿಗ್ರಹಿಸಲು ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಿದೆ. ದೇಶದಲ್ಲಿ ಭಯೋತ್ಪಾದನೆ ತೀವ್ರಗೊಳ್ಳುತ್ತಿದೆ. ಆದರೆ ಗೃಹ ಸಚಿವ ಶಿವರಾಜ್ ಪಾಟೀಲ್ ಸಮರ್ಥವಾಗಿ ಕಾರ್ಯನಿರ್ವಹಿಸದಿರುವ ಬಗ್ಗೆ ಸರ್ಕಾರದ ಅನೇಕ ಹಿರಿಯ ಮುಖಂಡರಲ್ಲಿ ಅಸಮಾಧಾನವಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಸ್ಥಾನಕ್ಕೆ ಸರಿಸಮನಾಗಿರುವ ಇನ್ನೊಂದು ಹುದ್ದೆಯನ್ನು ರೂಪಿಸಿದರೆ ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಈ ಕುರಿತಂತೆ ಕೂಡ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಹೈದರಾಬಾದ್, ಜೈಪುರ್, ಬೆಂಗಳೂರು, ಅಹಮದಾಬಾದ್ ಹಾಗೂ ಇತ್ತೀಚಿನ ದಿಲ್ಲಿ ಸ್ಫೋಟಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಈ ಸ್ಫೋಟಗಳು ಗುಪ್ತಚರ ಇಲಾಖೆಯ ವೈಪಲ್ಯವನ್ನು ತೋರಿಸುತ್ತದೆ ಎನ್ನುವುದು ಸ್ಪಷ್ಟವಾಗಿದೆ. ಕೇಂದ್ರದ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಬಹಿರಂಗವಾಗಿ ತಮ್ಮ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಶೀಘ್ರದಲ್ಲಿ ಸಂಪುಟ ಸಭೆ ಕರೆದು ಈ ಕುರಿತು ಚರ್ಚಿಸುವಂತೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಒತ್ತಡ ಹೇರಿದ್ದರು. ಸ್ಫೋಟ ಘಟನೆ ಖಂಡಿಸಿ ಪ್ರತಿಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದಿದ್ದು, ಪ್ರಧಾನಮಂತ್ರಿಯವರು ರಾಜೀನಾಮೆಗೆ ಆಗ್ರಹಿಸಿದ್ದವು.
(ದಟ್ಸ್ ಕನ್ನಡ ವಾರ್ತೆ)
ಉಗ್ರರ ನಿಗ್ರಹಕ್ಕೆ ನೂತನ ಕಾಯ್ದೆ ಬೇಕು : ಮೊಯ್ಲಿ