ಹಿಂದು ಸಂಘಟನೆ ನಿಷೇಧಿಸುವ ಪ್ರಶ್ನೆಯೇ ಇಲ್ಲ
ಗುಲ್ಬರ್ಗಾ, ಸೆ. 17 : ಮಂಗಳೂರು ಕೋಮು ಗಲಭೆ ಹಿನ್ನೆಲೆಯಲ್ಲಿ ಭಜರಂಗದಳ ಸೇರಿದಂತೆ ಹಿಂದುಪರ ಸಂಘಟನೆಗಳನ್ನು ನಿಷೇಧಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ಹಿಂದುಪರ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಕೇಂದ್ರ ಮನವಿ ಮಾಡಲಾಗುವುದು ಎಂದು ಹೇಳಿರುವ ಬೆನ್ನಲ್ಲೇ ಮುಖ್ಯಮಂತ್ರಿಯವರ ಈ ಹೇಳಿಕೆ ಕುತೂಹಲ ಕೆರಳಿಸಿದೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕಾನೂನು ಕೈಗೆತ್ತಿಕೊಳ್ಳವವರ ವಿರುದ್ಧ ಉಗ್ರ ಕ್ರಮ ಕಾದಿದೆ ಎಂದರು. ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಹಿಂದುಪರ ಸಂಘಟನೆಗಳ ಮೇಲಿನ ಪ್ರಕರಣಗಳೂ ಸೇರಿದಂತೆ ಒಟ್ಟು 150 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು.
ಮಂಗಳೂರಿನಲ್ಲಿರುವ ನ್ಯೂಲೈಫ್ ಎಂಬ ಕ್ರೈಸ್ತ ಮಿಷನರಿಯೊಂದು ಕಳೆದ ಅನೇಕ ದಿನಗಳಿಂದ ಮತಾಂತರದಲ್ಲಿ ತೊಡಗಿದೆ. ಈ ಮಿಷಿನರಿಗೆ ವಿದೇಶದಿಂದ ಹಣ ಬರುತ್ತಿದ್ದು, ಮಂಗಳೂರು ಸೇರಿ ರಾಜ್ಯ ಅನೇಕ ಕಡೆಯಲ್ಲಿ ಅವ್ಯಾಹತವಾಗಿ ಮತಾಂತರ ನಡೆದಿದೆ. ಈ ಬಗ್ಗೆ ಸರ್ಕಾರದ ಬಳಿ ದಾಖಲೆಗಳಿವೆ. ಆದ್ದರಿಂದ ನ್ಯೂಲೈಫ್ ಸಂಘಟನೆಯ ಮೇಲೆ ನಿಗಾ ಇರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.
60 ನೇ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಸಂದರ್ಭದಲ್ಲಿ ಹೈದರಾಬಾದ್ ಸ್ವಾತಂತ್ರ್ಯಕ್ಕೆ ಶ್ರಮಿಸಿದ ನಿಜಾಮ್ ಕಿರು ಹೊತ್ತಿಗೆಯನ್ನು ಸರ್ಕಾರದ ವತಿಯಿಂದ ಹೊರತರಲಾಗುವುದು ಎಂದರಲ್ಲದೇ, ಶಾಲಾ ಪಠ್ಯದಲ್ಲಿ ನಿಜಾಮರ ಸಂಕ್ಷಿಪ್ತ ಚರಿತ್ರೆಯನ್ನು ದಾಖಲಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
ರಾಜ್ಯದ ಪ್ರಮುಖ ನಗರಗಳಲ್ಲಿ ವಿಮಾನಯಾನ ಸಂಚಾರಕ್ಕೆ ಬಿಜೆಪಿ ಸರ್ಕಾರ ಮುಂದಾಗಿದ್ದು, ಮೈಸೂರು ಮತ್ತು ಬೀದರ್ ನಗರದಲ್ಲಿ ಮುಂದಿನ ವರ್ಷದಿಂದ ವಿಮಾನ ಸಂಚಾರ ಆರಂಭವಾಗಲಿದೆ ಎಂದು ಹೇಳಿದರು. 2010 ವೇಳೆಗೆ ಗುಲ್ಬರ್ಗಾದ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳಲಿದೆ. ಆಯ್ದ 10 ಜಿಲ್ಲೆಗಳಲ್ಲಿ ಸುಮಾರು 46 ಕೋಟಿ ರುಪಾಯಿ ವೆಚ್ಚದಲ್ಲಿ ಏರ್ ಸ್ಟ್ರೀಪ್ ನಿರ್ಮಿಸಲಾಗುವುದು ಎಂದು ಹೇಳಿದರು.
ಹೈದರಾಬಾದ್ ಕರ್ನಾಟಕದ ಸಮಸ್ಯೆಗಳಿಗೆ ಕಾಯಕಲ್ಪ ನೀಡಲು ಬಿಜೆಪಿ ಸರ್ಕಾರ ಪಣ ತೊಟ್ಟಿದ್ದು, ಈ ಹಿನ್ನೆಲೆಯಲ್ಲಿ ಸೆ. 26 ರಂದು ನಗರದಲ್ಲಿ ಸಚಿವ ಸಂಪುಟ ಸಭೆಯನ್ನು ನಡೆಸಲಾಗುವುದು. ಅಭಿವೃದ್ಧಿ ಪರವಾಗಿರುವ ಸರ್ಕಾರ ಮುಂದಿನ ವರ್ಷ ಒಂದು ಲಕ್ಷ ಉದ್ಯೋಗ ಸೃಷ್ಟಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಲಿದೆ. ಇದೇ 20 ರಂದು ಜನಸ್ಪಂದನ ಎಂಬ ನೂತನ ಯೋಜನೆಯನ್ನು ಘೋಷಣೆ ಮಾಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಗುಲ್ಬರ್ಗಾದಲ್ಲಿ
ಪ್ರತಿ
ವರ್ಷ
ಸಂಪುಟ
ಸಭೆ
:ಸಿಎಂ
ಅಗತ್ಯ
ಬಿದ್ದರೆ
ಹಿಂದುಪರ
ಸಂಘಟನೆಗಳ
ನಿಷೇಧ