ಹಿಂದಿ ಸಿನಿಮಾ ಬಂದ್ : ಕರವೇ ಎಚ್ಚರಿಕೆ
ಬೆಂಗಳೂರು, ಸೆ. 12 : ಕರ್ನಾಟಕದಲ್ಲಿ ಹಿಂದಿ ಚಲನಚಿತ್ರ ಮತ್ತು ಹಿಂದಿಯಲ್ಲಿ ಬಿತ್ತರವಾಗುವ ಟಿವಿ ಚಾನಲ್ಲುಗಳನ್ನು ಬಹಿಷ್ಕರಿಸುವ ಚಳವಳಿಯನ್ನು ಹಮ್ಮಿಕೊಳ್ಳಲು ಕರ್ನಾಟಕ ಹಿತರಕ್ಷಣಾ ವೇದಿಕೆ ನಿರ್ಧರಿಸಿದೆ. ಕೇಂದ್ರ ಸರಕಾರವು ರಾಜ್ಯದ ಮೇಲೆ ಹೇರಿರುವ ಹಿಂದಿ ಸಪ್ತಾಹದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಸಲುವಾಗಿ ಈ ನಿರ್ಧಾರ ಕೈಗೊಂಡಿದೆ.
ಕೇಂದ್ರ ಮತ್ತು ರಾಜ್ಯದ ನಡುವೆ ಸಂಪರ್ಕ ಇಂಗ್ಲಿಷ್ ಭಾಷೆಯಲ್ಲಿರಬೇಕು. ಕರ್ನಾಟಕದಲ್ಲಿ ಆಡಳಿತ ಭಾಷೆ ಎಲ್ಲಾ ಸ್ತರಗಳಲ್ಲಿಯೂ ಕನ್ನಡದಲ್ಲೇ ನಡೆಯಬೇಕು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲು ಹಿಂದೆಮುಂದೆ ನೋಡುತ್ತಿರುವ ಯುಪಿಎ ಸರಕಾರ ಹಿಂದಿ ಸಪ್ತಾಹ ಆಚರಣೆಗೆ (ಸೆ. 7ರಿಂದ 14) ಅಪಾರ ಹಣ ವ್ಯಯ ಮಾಡುತ್ತಿದೆ ಎಂದು ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ಆರೋಪಿಸಿದ್ದಾರೆ.
ಹಿಂದಿ ಹೇರಿಕೆ ವಿರುದ್ಧ ವೇದಿಕೆಯ ಕಾರ್ಯಕರ್ತರು ಶುಕ್ರವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು. ಬೆಂಗಳೂರು, ಗದಗ, ಉಡುಪಿ, ಬಳ್ಳಾರಿ, ದಾವಣಗೆರೆ, ಧಾರವಾಡ, ರಾಯಚೂರು ಮುಂತಾದ ಹನ್ನೆರಡು ಜಿಲ್ಲಾ ಕೇಂದ್ರಗಳಲ್ಲಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಪ್ರತಿಕೃತಿ ಸುಡುವ "ಭೂತದಹನ" ಚಳವಳಿಯನ್ನು ನಡೆಸಲಾಯಿತು ಎಂದು ಅವರು ದಟ್ಸ್ ಕನ್ನಡಕ್ಕೆ ತಿಳಿಸಿದರು.
ನಾನಾ ಕಚೇರಿ, ಬ್ಯಾಂಕು, ಎಲ್ ಐ ಸಿ, ರೈಲ್ವೆ ಕಚೇರಿ ಮುಂತಾದೆಡೆ ಅವ್ಯಾಹತವಾಗಿ ನಡೆಯುತ್ತಿರುವ ಹಿಂದಿ ದರ್ಬಾರನ್ನು ಕನ್ನಡಿಗರು ಇನ್ನು ಸಹಿಸುವುದಿಲ್ಲ. ಮುಖ್ಯವಾಗಿ ರೈಲ್ವೆ ಕಚೇರಿಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಉದ್ಯೋಗ ಮೋಸವನ್ನು ಖಂಡಿಸಲು ಹಾಗೂ ಕನ್ನಡ ಕರ್ನಾಟಕ ಹಿತರಕ್ಷಣೆಗಾಗಿ ಹಿಂದಿ ಬಳಸುವ ಕಚೇರಿಗಳು, ಹಿಂದಿ ಸಿನಿಮಾ ಮತ್ತು ಕೇಬಲ್ಲುಗಳ ವಿರುದ್ಧ ಸಮರ ಸಾರಲಾಗುವುದೆಂದು ಗೌಡರು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ
ಓದಿಗೆ
ಹಿಂದಿ
ನ್ಯಾಷನಲ್ಲು,ಕನ್ನಡ
ಲೋಕಲ್ಲಾ?!