ಹಾಲಿನ ದರ ಏರಿಕೆಗೆ ಸರ್ಕಾರ ಅಸಮ್ಮತಿ
ಬೆಂಗಳೂರು, ಸೆ. 7 : ಹಾಲಿನ ದರದ ಏರಿಕೆ ಪ್ರಸ್ತಾಪ ಮಾಡಿರುವ ಕೆಎಂಎಫ್ ಅಧ್ಯಕ್ಷ ಎಚ್.ಡಿ.ರೇವಣ್ಣ ಅವರ ಹೇಳಿಕೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸಾರಾಸಗಾಟಾಗಿ ತಳ್ಳಿಹಾಕಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿನ ದರ ಏರಿಸುವ ಚಿಂತನೆ ಸರ್ಕಾರ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಕೆಎಂಎಫ್ ಮತ್ತು ಸರ್ಕಾರದ ನಡುವೆ ಮುಸುಕಿನ ಗುದ್ದಾಟ ಆರಂಭವಾದಂತಾಗಿದೆ.
ಪಶು ಆಹಾರ ಮತ್ತು ಹಾಲಿನ ದರದ ಏರಿಕೆಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಎಚ್.ಡಿ.ರೇವಣ್ಣ ಹೇಳಿದ್ದರು. ಇದೇ 12 ರಂದು 13 ಜಿಲ್ಲಾ ಹಾಲು ಒಕ್ಕೂಟಗಳ ಸರ್ವಸಭೆ ನಡೆಯಲಿದೆ. ಕೆಎಂಎಫ್ ಗೆ ಆಪಾರ ಪ್ರಮಾಣದಲ್ಲಿ ನಷ್ಟವಾಗುತ್ತಿದ್ದು, ಇದನ್ನು ತಪ್ಪಿಸುವ ನಿಟ್ಚಿನಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು. ಒಕ್ಕೂಟದ ಅಧ್ಯಕ್ಷ ಮತ್ತು ಸದಸ್ಯರೊಡನೆ ಚರ್ಚೆ ಮಾಡಿದ ನಂತರವಷ್ಟೇ ದರ ಏರಿಕೆ ನಿರ್ಧಾರ ಮಾಡಲಾಗುವುದು ಎಂದರು. ಪಶು ಆಹಾರ ಮತ್ತು ಉತ್ಪಾದನೆಗೆ ಬಳಸುವ ಕಚ್ಚಾ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಪಶು ಆಹಾರ ಮತ್ತು ಹಾಲಿನ ಮಾರಾಟ ದರವನ್ನು ಏರಿಸಲು ಕರ್ನಾಟಕ ಹಾಲು ಮಹಾಮಂಡಳಿ(ಕೆಎಂಎಫ್) ಚಿಂತನೆ ನಡೆಸಿದೆ.
ಕಚ್ಚಾ ವಸ್ತುಗಳ ಬೆಲೆಯು ಶೇ. 27ರಷ್ಟು ಹೆಚ್ಚಳವಾಗಿದ್ದು, ಕಳೆದ ಮೂರು ತಿಂಗಳಲ್ಲಿ ಮಂಡಳಿಯು 6.70 ಕೋಟಿ ರುಪಾಯಿ ನಷ್ಟ ಅನುಭವಿಸಿದೆ. ಇದರ ಹಿನ್ನೆಲೆಯಲ್ಲಿ ಪಶು ಆಹಾರ, ಹಾಲಿನ ದರ ಏರಿಸುವುದು ಅನಿವಾರ್ಯವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
(ದಟ್ಸ್ ಕನ್ನ ವಾರ್ತೆ)
ಕೆಎಂಎಫ್ ಹಾಲು ತುಟ್ಟಿಯಾಗುವ ಸಾಧ್ಯತೆ