ಕಲುಷಿತ ನೀರು ಕುಡಿದು 30 ವಿದ್ಯಾರ್ಥಿಗಳು ಅಸ್ವಸ್ಥ
ಗುಲಬರ್ಗಾ, ಸೆ. 6 : ಚಿಂಚೋಳಿ ತಾಲೂಕಿನ ನಿಡುಗೊಂಡ ಗ್ರಾಮದ ಮೋರಾರ್ಜಿ ದೇಸಾಯಿ ವಸತಿ ಶಾಲೆಯ 30ಕ್ಕೂ ಹೆಚ್ಚಿನ ಮಕ್ಕಳು ಶಾಲೆಯಲ್ಲಿನ ಟ್ಯಾಂಕಿನ ನೀರು ಕುಡಿದು ಅಸ್ವಸ್ಥಗೊಂಡಿರುವ ಘಟನೆ ಶನಿವಾರ ಬೆಳಿಗ್ಗೆ ಜರುಗಿದೆ.
ಬೆಳಿಗ್ಗೆ ಉಪಹಾರ ಸೇವಿಸಿದ ನಂತರ ನೀರು ಕುಡಿಯುತ್ತಿದ್ದಂತೆ ಮಕ್ಕಳೆಲ್ಲರೂ ವಾಂತಿ ಮಾಡಿಕೊಳ್ಳಲು ಶುರು ಮಾಡಿದ್ದಾರೆ. ಅವರನ್ನು ತಕ್ಷಣ ನಿಡುಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಮೂವತ್ತು ವಿದ್ಯಾರ್ಥಿಗಳಲ್ಲಿ ಹತ್ತು ವಿದ್ಯಾರ್ಥಿಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಾಗಿದ್ದು ಉಳಿದವರನ್ನು ಪ್ರಥಮ ಚಿಕಿತ್ಸೆ ನೀಡಿದ ನಂತರ ಬಿಡುಗಡೆ ಮಾಡಲಾಗಿದೆ.
ತಾಲೂಕಿನ ಆರೋಗ್ಯ ಅಧಿಕಾರಿ ಡಾ. ರಾಜಕುಮಾರ್ ಶಾಲೆಗೆ ಭೇಟಿ ನೀಡಿ ನೀರಿನ ಟ್ಯಾಂಕನ್ನು ಪರಿಶೀಲಿಸಿದರು. ಶಾಲೆಯ ನೀರಿನ ಟ್ಯಾಂಕನ್ನು ಅನೇಕ ತಿಂಗಳುಗಳಿಂದ ಸ್ವಚ್ಛಗೊಳಿಸೇ ಇಲ್ಲ ಎನ್ನುವುದು ವಿದ್ಯಾರ್ಥಿಗಳ ಪಾಲಕರ ದೂರು. ಶಾಲಾ ಆಡಳಿತ ವಿದ್ಯಾರ್ಥಿಗಳ ಆರೋಗ್ಯದತ್ತ ಕಿಂಚಿತ್ತೂ ಕಾಳಜಿವಹಿಸದಿರುವುದು ವಿಷಾದನೀಯ ಎಂದು ಅವರು ಆರೋಪಿಸಿದ್ದಾರೆ.
(ಯುಎನ್ಐ)