ಬೆಂಗಳೂರಿನಲ್ಲಿ 50 ಸಾವಿರ ಕೋಟಿ ರು. ಕೆರೆ ಒತ್ತುವರಿ
ಬೆಂಗಳೂರು,ಆ.26: ಬೆಂಗಳೂರಿನಲ್ಲಿ ಭೂ ಮಾಫಿಯಾ ತನ್ನ ಕಬಂಧ ಬಾಹುಗಳನ್ನು ಚಾಚಿ ನಗರ ವ್ಯಾಪ್ತಿಯ ಕೆರೆಗಳಿಗೆ ಸಂಬಂಧಿಸಿದ ಸುಮಾರು 5 ಸಾವಿರ ಎಕರೆ ಜಮೀನನ್ನು ಕಬಳಿಸಿದೆ. ಇದರ ಬೆಲೆ 50 ಸಾವಿರ ಕೋಟಿ ರು.ಗಳು ಎಂದು ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ ಬುಧವಾರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕೆರೆ ಒತ್ತುವರಿ ತೆರವುಗೊಳಿಸಲು ಕಂದಾಯ,ಅರಣ್ಯ ಇಲಾಖೆ, ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆಗಳನ್ನೊಳಗೊಂಡ ಕಾರ್ಯಪಡೆ ರಚಿಸಲಾಗುತ್ತದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಉತ್ತರಿಸಿದರು.
ಬೆಂಗಳೂರು ನಗರ ಪ್ರದೇಶದಲ್ಲಿ 72 ಕೆರೆಗಳಿವೆ. ಒತ್ತುವರಿಯಾಗಿರುವ ಕೆರಗಳ ಬಗ್ಗೆ ಸಮೀಕ್ಷೆ ನಡೆಸಲಾಗುತ್ತದೆ. 15 ಕೆರಗಳ ಸಮೀಕ್ಷೆ ಈಗಾಗಲೇ ಮುಗಿದಿದ್ದು, 23 ಕೆರೆಗಳ ಸಮೀಕ್ಷೆ ಪ್ರಗತಿಯಲ್ಲಿದೆ. ಇದರಿಂದ ದೊರೆತ ಮಾಹಿತಿ ಪ್ರಕಾರ ಸುಮಾರು 5 ಸಾವಿರ ಎಕರೆ ಪ್ರದೇಶವನ್ನು ಭೂಗಳ್ಳರು ಕಬಳಿಸಿದ್ದಾರೆ. ಅದರ ಇಂದಿನ ಮಾರುಕಟ್ಟೆ ಬೆಗೆ 50 ಸಾವಿರ ಕೋಟಿ ರು.ಗಳಷ್ಟಾಗಬಹುದು. ಒತ್ತುವರಿಯಾದ ಜಮೀನಿನಲ್ಲಿ ಕಟ್ಟಡ ಹಾಗೂ ದೇವಸ್ಥಾನಗಳನ್ನು ನಿರ್ಮಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಕೆರೆ ಒತ್ತುವರಿ ಮಾಡಿರುವ ಯಾರೇ ಆಗಲಿ ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ. ಸಮೀಕ್ಷೆಯ ನಂತರ ಒತ್ತುವರಿಯಾದ ಜಮೀನನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತದೆ. ಒತ್ತುವರಿ ಸ್ಥಳಗಳಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿಗಿಡ ನೆಡಲಾಗುತ್ತದೆ. ಕೆರೆಗಳ ಸಮೀಕ್ಷೆಗಾಗಿ ಬಜೆಟ್ನಲ್ಲಿ 2 ಕೋಟಿ ರು.ಗಳನ್ನು ಮೀಸಲಿರಿಸಲಾಗಿದೆ ಎಂದು ಕಾರಜೋಳ ತಿಳಿಸಿದರು.
(ದಟ್ಸ್ಕನ್ನಡ ವಾರ್ತೆ)