ಚಿರಂಜೀವಿ ನೂತನ ಪಕ್ಷ 'ಪ್ರಜಾರಾಜ್ಯಂ 'ಆರಂಭ
ತಿರುಪತಿ, ಆ. 26 : ನಟ ಚಿರಂಜೀವಿ ತಮ್ಮ ನೂತನ ಪಕ್ಷ ' ಪ್ರಜಾರಾಜ್ಯಂ' ಮಂಗಳವಾರತಿರುಪತಿಯಲ್ಲಿ ಲಕ್ಷಾಂತರ ಅಭಿಮಾನಿಗಳ ನಡುವೆ ಉದ್ಘಾಟನೆ ಮಾಡಿದರು.ಚಿರಂಜೀವಿ ರಾಜಕೀಯಕ್ಕೆ ಪ್ರವೇಶಿಸುವ ಮೂಲಕ ಆಂಧ್ರಪ್ರದೇಶದಲ್ಲಿ ನೂತನ ರಾಜಕೀಯ ಶಕೆ ಪ್ರಾರಂಭವಾಗಿದೆ.
ಬಹಳಷ್ಟು ದಿನಗಳಿಂದ ಚಿರಂಜೀವಿ ರಾಜಕೀಯ ಪ್ರವೇಶ ಆಂಧ್ರ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಇಂದು ಪಕ್ಷ ಉದ್ಘಾಟನೆಯಾಗುವ ಮೂಲಕ ಕುತೂಹಲಕ್ಕೆ ತೆರೆ ಬಿತ್ತು. ಚಿರಂಚೀವಿ ಮಂಗಳವಾರ ಅಧಿಕೃತವಾಗಿ ತಮ್ಮ ನೂತನ ಪಕ್ಷದ ಘೋಷಣೆಯ ಜತೆಗೆ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ತಿರುಪತಿ ನವನಧುವಿನಂತೆ ಕಂಗೊಳಿಸುತ್ತಿತ್ತು.
ಭೂಮಂಡಲದ ನಾನಾ ಕಡೆಗಳಲ್ಲಿ ನೆಲೆಸಿರುವ ಚಿರಂಜೀವಿ ಅಭಿಮಾನಿಗಳು ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಹಾಜರಾಗಿದ್ದರು. ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮಕ್ಕೆ ಲಕ್ಷಾಂತರ ಜನರ ಆಗಮಿಸುವ ನಿರೀಕ್ಷೆ ಇರುವುದರಿಂದ ತಿರುಪತಿಗೆ ಹೆಚ್ಚುವರಿ 18 ರೈಲುಗಳ ವ್ಯವಸ್ಥೆ ಮಾಡಲಾಗಿತ್ತು. ಆಂಧ್ರಪ್ರದೇಶ ರಾಜ್ಯ ಸಾರಿಗೆ ಸಂಸ್ಥೆಯ ನೂರಾರು ಬಸ್ಸುಗಳು ತಿರುಪತಿಗೆ ಸಂಚರಿಸಲಿವೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ತಿರುಪತಿಯ ಎಲ್ಲ ರೈಲುಗಳ ಟಿಕೆಟ್ ಕೆಲ ದಿನಗಳ ಹಿಂದೆಯೇ ಬುಕ್ ಆಗಿವೆ.
ಖಾಸಗಿ ವಿಮಾನ ಸಂಸ್ಥೆಗಳಾದ ಕಿಂಗ್ ಫಿಷರ್ ಹಾಗೂ ಏರ್ ಡೆಕ್ಕನ್ ವಿಮಾನಗಳ ಟಿಕೆಟ್ ಮಾರಾಟವಾಗಿವೆ. 126 ಎಕರೆ ಪ್ರದೇಶದಲ್ಲಿ ಬಸ್ಸು ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಜಿಲ್ಲೆಯಿಂದ ಸುಮಾರು 200ಕ್ಕೂ ಹೆಚ್ಚು ಬಸ್ಸುಗಳು ತಿರುಪತಿಗೆ ಆಗಮಿಸಿದ್ದವು. 3 ಸಾವಿರ ಪೊಲೀಸರನ್ನು ನಿಯೋಜಿಸಲು ಪೊಲೀಸ್ ಇಲಾಖೆ ಕಂಕಣತೊಟ್ಟಿತ್ತು. ನಟ ಚಿರಂಜೀವಿಗೆ 20ಕ್ಕೂ ಹೆಚ್ಚು ಜನ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಈ ಎಲ್ಲ ಭದ್ರತೆ ಹಾಗೂ ಅಭಿಮಾನಿಗಳ ಹರ್ಷೋದ್ಗಾರದ ನಡುವೆ ಪ್ರಜಾರಾಜ್ಯಂ ಪಕ್ಷ ಉದ್ಘಾಟನೆಯಾಯಿತು.
(ಏಜೆನ್ಸೀಸ್)