ನೈನಾದೇವಿ ಆಲಯದಲ್ಲಿ ನೂಕು ನುಗ್ಗಲು; 100 ಸಾವು
ಸಿಮ್ಲಾ, ಆ.3 : ಇಲ್ಲಿನ ಬೆಟ್ಟದ ಮೇಲಿರುವ ನೈನಾದೇವಿ ದೇವಸ್ಥಾನಕ್ಕೆ ಪ್ರವೇಶಿಸಲು ನೂಕುನುಗ್ಗಲು ಉಂಟಾಗಿ ಗೋಡೆ ಕುಸಿದ ಪರಿಣಾಮ ಕಾಲ್ತುಳಿತಕ್ಕೆ ಸಿಕ್ಕಿ ಸುಮಾರು 30 ಮಕ್ಕಳು ಸೇರಿದಂತೆ 100 ಕ್ಕೂ ಹೆಚ್ಚು ಭಕ್ತಾಧಿಗಳು ಭಾನುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಹಿಮಾಚಲ ಪ್ರದೇಶದ ಬಿಲಾಸ್ ಪುರ್ ಜಿಲ್ಲೆಯಲ್ಲಿ ನಡೆದ ಈ ದುರ್ಘಟನೆಯಲ್ಲಿ 300ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದಾರೆ.
ಬೆಟ್ಟದ ಮೇಲಿರುವ ದೇವಾಲಯಕ್ಕೆ ವಿಶೇಷವಾಗಿ ಮಹಿಳೆಯರೇ ಹೆಚ್ಚಾಗಿ ಆಗಮಿಸಿದ್ದರು ಎನ್ನಲಾಗಿದೆ. ಐತಿಹಾಸಿಕ ಕಥೆಯೊಂದರ ಹಿನ್ನೆಲೆಯಲ್ಲಿ ಈ ದೇವಸ್ಥಾನ ಪ್ರಸಿದ್ಧಿ ಪಡೆದಿದೆ. ಅಲ್ಲದೇ ಶ್ರಾವಣ ಮಾಸದ ಪ್ರತಿ ಭಾನುವಾದಂದು ಇಲ್ಲಿ ನೈನಾದೇವಿಯ ನವರಾತ್ರಿ ಮೇಳ ನಡೆಯುತ್ತದೆ. ಈ ದೇವಸ್ಥಾನಕ್ಕೆ ತೆರಳಿ ಪೂಜೆ ಹಾಗೂ ಹರಕೆಗಳನ್ನು ನೆರವೇರಿಸಿದರೆ ಇಷ್ಟಾರ್ಥಸಿದ್ಧಿಸುತ್ತದೆ ಎಂಬ ಬಲವಾದ ನಂಬಿಕೆ ಇಲ್ಲಿನ ಜನರಲ್ಲಿದೆ. ಆ ಕಾರಣದಿಂದ ಶ್ರಾವಣ ಮಾಸದ ತಿಂಗಳಲ್ಲಿ ಪ್ರತಿದಿನ ರಾತ್ರಿ ನವರಾತ್ರಿ ಮೇಳ ಆಚರಿಸುವುದರಿಂದ ಈ ದೇವಸ್ಥಾನಕ್ಕೆ ಸಾವಿರಾರು ಜನರು ಭಕ್ತಾರು ಆಗಮಿಸುತ್ತಾರೆ. ಶನಿವಾರದಿಂದ ಆರಂಭವಾಗಿರುವ ಶ್ರಾವಣಮಾಸಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸಿದ ನೂಕು ನುಗ್ಗಲು ಉಂಟಾದ ಪರಿಣಾಮ ದೇವಸ್ಥಾನದ ಗೋಡೆ ಕುಸಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಭಾನುವಾರದಂದು ನವರಾತ್ರಿ ಆಚರಣೆಯ ಪ್ರಯುಕ್ತ ಇಂದು ಸುಮಾರು 50 ಸಾವಿರ ಭಕ್ತರು ಅಲ್ಲಿ ನೆರೆದಿದ್ದರು. ಬೆಟ್ಟದ ಮೇಲಿರುವ ನೈನಾದೇವಿಯ ದೇವಸ್ಥಾನಕ್ಕೆ ತೆರಳುವ ದಾರಿ ಇಕ್ಕಟ್ಟಿನಿಂದ ಕೂಡಿದ್ದು, ಜನಸಾಗರದ ಒತ್ತಡ ತಡೆಯಲಾರದೇ ರಸ್ತೆ ಕುಸಿದು ಈ ದುರಂತ ಸಂಭವಿಸಿದೆ. ಇನ್ನೂ ಅನೇಕ ಭಕ್ತರು ಸಮೀಪ ಕೊಳದಲ್ಲಿ ಬಿದ್ದಿದ್ದಾರೆ ಎಂದು ಅಂದಾಜಿಸಲಾಗಿದೆ. 500ಕ್ಕೂ ಹೆಚ್ಚು ಜನರು ಗಾಯಗೊಂಡಿರಬಹುದೆಂದು ಪ್ರತ್ಯಕ್ಷದರ್ಶಿಗಳು ಶಂಕೆ ವ್ಯಕ್ತಪಡಿಸುತ್ತಾರೆ. ಘಟನಾಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಮೃತಪಟ್ಟವರನ್ನು ಹೊರ ತೆಗೆಯುವ ಕಾರ್ಯ ಮುಂದುವರೆದಿದೆ. ಮಹಿಳೆ ಮತ್ತು ಮಕ್ಕಳನ್ನು ಕಳೆದುಕೊಂಡವರ ಅಕ್ರಂದನ ಮುಗಿಲು ಮುಟ್ಟಿತ್ತು. ಜನಸಾಗರ ತಡೆಯಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ.
(ಏಜೆನ್ಸೀಸ್)