ರಾಜ್ಯ ಬೊಕ್ಕಸದಿಂದ ಠಾಕೂರಿಗೆ 23 ಲಕ್ಷದ ಕಾರು
ಬೆಂಗಳೂರು, ಜು.30: ರಾಜ್ಯಪಾಲ ರಾಮೇಶ್ವರ್ ಠಾಕೂರ್ 23 ಲಕ್ಷ ರು.ಲಕ್ಷದ ಹೊಸ ಕಾರನ್ನು ಖರೀದಿಸಿದ್ದಾರೆ. ಇದರ ವೆಚ್ಚವನ್ನು ಸರ್ಕಾರದ ಸಾದಿಲ್ವಾರು ಠೇವಣಿಯಿಂದ ಭರಿಸಲಾಗಿದೆ ಎಂದು ರಾಜಭವನ ಮೂಲಗಳು ತಿಳಿಸಿವೆ.
ರಾಜ್ಯಪಾಲರಿಗೆ ಬೆನ್ನುನೋವು ಹಾಗೂ ಅವರ ಹಳೆಯ ಕಾರು ನಿಜವಾಗಿಯೂ ಹಳತಾಗಿರುವುದರಿಂದ ರು.23 ಲಕ್ಷ ವೆಚ್ಚದ ಹೊಂಡಾ ಸಿಆರ್-ವಿ ಕಾರನ್ನು ಖರೀದಿಸಲಾಗಿದೆ. 2008-09ನೇ ಸಾಲಿನ ಮುಂಗಡಪತ್ರದಲ್ಲಿ ಈ ದುಬಾರಿ ಕಾರು ಖರೀದಿಗೆ ಹಣ ಹೊಂಚಲು ಸಾಧ್ಯವಾಗದ ಕಾರಣ ಸಾದಿಲ್ವಾರು ಠೇವಣಿಯಿಂದ ಕಾರಿನ ವೆಚ್ಚವನ್ನು ಭರಿಸಲಾಗಿದೆ. ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ (DPAR) ಪೂರಕ ಅಂದಾಜು ವೆಚ್ಚಗಳಲ್ಲಿ ಇದರ ವೆಚ್ಚವನ್ನು ಸೇರಿಸಿದೆ. ಈ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಸದನದಲ್ಲಿ ಮಂಡಿಸಿದರು. ಕಾರಿನ ವೆಚ್ಚ 23 ಲಕ್ಷ ರು.ಗಳು ಸೇರಿದಂತೆ ಒಟ್ಟು 34.17 ಕೋಟಿ ರು.ಗಳ ಮುಂಗಡ ಪತ್ರದ ಪೂರಕ ಅಂದಾಜು ವೆಚ್ಚದಲ್ಲಿ ಸೇರಿವೆ.
ರೈತರಿಗೆ ಕಬ್ಬು ಖರೀದಿ ಬಾಕಿ ನೀಡಲು ಮೈಸೂರು ಸಕ್ಕರೆ ಕಾರ್ಖಾನೆಗೆ 4 ಕೋಟಿ ರು; ಬಾಗಲಕೋಟೆ ಜಿಲ್ಲೆಯ ಬನಹಟ್ಟು ಸಹಕಾರಿ ನೂಲಿನ ಗಿರಣಿ ಆಧುನೀಕರಣಕ್ಕಾಗಿ 2.92 ಕೋಟಿ ರು. ಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.ಹಾಗೆಯೇ ರಸಗೊಬ್ಬರ ದಾಸ್ತಾನಿಗಾಗಿ 17 ಕೋಟಿ ರು.; ತೆಂಗು ಅಭಿವೃದ್ಧಿ ಮಂಡಳಿಯ ಯೋಜನೆ ಅನುಷ್ಠಾನಕ್ಕಾಗಿ 1.25 ಕೋಟಿ ರು. ; ಧಾರವಾಡ, ಗುಲ್ಬರ್ಗ ಸಂಚಾರಿ ಪೀಠಗಳ ವೇತನ ಹಾಗೂ ವೇತನೇತರ ವೆಚ್ಚಗಳಿಗಾಗಿ 4.5 ಕೋಟಿ ರು. ಮುಂತಾದ ವೆಚ್ಚಗಳನ್ನು ಅವರು ತೋರಿಸಿದರು.
(ದಟ್ಸ್ಕನ್ನಡ ವಾರ್ತೆ)