ಕೇಂದ್ರ ಸಂಪುಟದಲ್ಲಿ ಸಚಿವಸ್ಥಾನದ ಆಕಾಂಕ್ಷಿ : ಶಿಬು
ಜಾರ್ಖಂಡ್, ಜು. 30 : ಪ್ರಧಾನಮಂತ್ರಿ ಮನಮೋಹನ್ ಸಿಂಗ್ ವಿದೇಶಿ ಪ್ರವಾಸದಲ್ಲಿದ್ದು ಅವರು ಸ್ವದೇಶಕ್ಕೆ ಹಿಂತಿರುಗಿದ ನಂತರ ನಾನು ಜಾರ್ಖಂಡ್ ಮುಖ್ಯಮಂತ್ರಿಯಾಗಬೇಕೋ ಇಲ್ಲವೇ ಕೇಂದ್ರ ಸರ್ಕಾರದ ಸಂಪುಟದಲ್ಲಿ ಸಚಿವನಾಗಬೇಕೋ ಅನ್ನುವುದನ್ನು ನಿರ್ಧಾರವಾಗಲಿದೆ ಎಂದು ಜೆಎಂಎಂ ಮುಖ್ಯಸ್ಥ ಸಿಬು ಶೋರೇನ್ ಹೇಳಿದ್ದಾರೆ.
ಕೇಂದ್ರದ ಯುಪಿಎ ಸರ್ಕಾರ ವಿಶ್ವಾಸಮತ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿರುವ ಜೆಎಂಎಂ ಪಕ್ಷಕ್ಕೆ ಮನಮೋಹನ್ ಸಿಂಗ್ ಕೆಲವು ಷರತ್ತುಗಳಿಗೆ ಒಪ್ಪಿಕೊಂಡಿದ್ದಾರೆ ಎಂದರು. ಪರಮಾಣು ಒಪ್ಪಂದ ವಿಷಯದಲ್ಲಿ ಯುಪಿಎ ನೀಡಿದ್ದ ಬೆಂಬಲವನ್ನು ಎಡಪಕ್ಷಗಳು ಹಿಂತೆಗೆದುಕೊಂಡಾಗ ಯುಪಿಎ ಅತ್ಯಂತ ಕೆಟ್ಟ ಸ್ಥಿತಿಯಲ್ಲಿತ್ತು. ಅಂದು ನಾವು ಬೆಂಬಲ ಘೋಷಿಸದಿದ್ದರೆ, ಬಹುಶಃ ಯುಪಿಎ ಸರ್ಕಾರ ವಿಶ್ವಾಸಮತದಲ್ಲಿ ಸೋಲುಂಟಾಗುತ್ತಿತ್ತು. ಆದರೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮನವಿ ಮೇರೆಗೆ ಯುಪಿಎ ಸರ್ಕಾರಕ್ಕೆ ಮತ ಹಾಕಲು ನಿರ್ಧರಿಸಲಾಯಿತು. ಆಗ ಕೆಲ ಷರತ್ತು ಮತ್ತು ಬೇಡಿಕೆಗಳನ್ನು ಈಡೇರಿಸುವುದಾಗಿ ಪ್ರಧಾನಮಂತ್ರಿಗಳು ಭರವಸೆ ನೀಡಿದ್ದರು.
ಸದ್ಯ ಪ್ರಧಾನಮಂತ್ರಿಯವರು ಶ್ರೀಲಂಕಾ ಪ್ರವಾಸದಲ್ಲಿದ್ದು, ಸ್ವದೇಶಕ್ಕೆ ಬಂದ ನಂತರ ನಾನು ಕೇಂದ್ರ ಸರ್ಕಾರದಲ್ಲಿ ಮಂತ್ರಿ ಸ್ಥಾನ ಅಥವಾ ಜಾರ್ಖಂಡ್ ನ ಮುಖ್ಯಮಂತ್ರಿ ಸ್ಥಾನ ಅಲಂಕರಿಸಬೇಕು ಎನ್ನುವುದನ್ನು ಅವರು ನಿರ್ಧರಿಸಲಿದ್ದಾರೆ ಎಂದು ಸೋರೇನ್ ಸ್ಪಷ್ಟಪಡಿಸಿದರು. ಜೆಎಂಎಂನ ಐದು ಸಂಸದರು ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿಲಿದ್ದಾರೆ ಎನ್ನುವ ಗಾಳಿ ಸುದ್ದಿಗೆ ಉತ್ತರಿಸಿದ ಅವರು ಇಬ್ಬರಿಗೆ ಅವಕಾಶ ಮಾಡಿಕೊಡಲು ಪ್ರಧಾನಮಂತ್ರಿಯವರು ಒಪ್ಪಿಗೆ ನೀಡಿದ್ದಾರೆ. ರಾಜ್ಯದ ಅಭಿವೃದ್ಧಿ ನನ್ನ ಧ್ಯೇಯವಾಗಿದೆ. ಆದ್ದರಿಂದ ಕೇಂದ್ರದಲ್ಲಿ ಸಚಿವ ಸ್ಥಾನಕ್ಕೆ ಕೇಳಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಇದಕ್ಕೂ ಮುಂಚೆ ಶಿಬು ಸೋರೇನ್ ಕೇಂದ್ರದ ಕಲ್ಲಿದ್ದಲು ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೊಲೆ ಆಪಾದನೆಯಲ್ಲಿ ಆಪರಾಧಿ ಎಂದು ಸಾಬೀತಾದ ಹಿನ್ನಲೆಯಲ್ಲಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
(ದಟ್ಸ್ ಕನ್ನಡ ವಾರ್ತೆ)