ಓಟಿಗೆ ನೋಟು ಪ್ರಕರಣದ ಸಮಿತಿ ಸಭೆ
ನವದೆಹಲಿ, ಜು. 30 : ಓಟಿಗೆ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಸೋಮನಾಥ್ ಚಟರ್ಜಿ ರಚಿಸಿರುವ ಏಳು ಮಂದಿಯ ಸಮಿತಿಯ ಸಭೆ ಇಂದು ಸಂಸತ್ತಿನಲ್ಲಿ ನಡೆಯಲಿದೆ. ಓಟಿಗೆ ನೋಟು ಪ್ರಕರಣದ ಕೇಂದ್ರ ಬಿಂದು ಮಧ್ಯಪ್ರದೇಶದ ಬಿಜೆಪಿ ಸಂಸದರಾದ ಫಗ್ಗಾನ್ ಸಿಂಗ್ ಕುಲಾಸ್ತೆ, ಮಹಾವೀರ ಬೋಗಾರ್, ಅಶೋಕ ಅರ್ಗಲ್ ಹಾಗೂ ಪ್ರಕರಣವನ್ನು ಕುಟುಕು ಕಾರ್ಯಾಚರಣೆ ಮೂಲಕ ಲಂಚದ ದೃಶ್ಯಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿರುವ ಸಿಎನ್ಎನ್ -ಐಬಿಎನ್ ವಾರ್ತಾ ವಾಹಿನಿಯು ಸಭೆಯ ಮುಂದೆ ತಮ್ಮ ವಿವರಣೆಯನ್ನು ಸಲ್ಲಿಸುವ ಸಾಧ್ಯತೆಗಳಿವೆ.
ಕಾಂಗ್ರೆಸ್ ನಾಯಕ ಕಿಶೋರಿ ಚಂದ್ರ ದೇವೂ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ವಿ.ಕೆ.ಮಲ್ಹೋತ್ರಾ(ಬಿಜೆಪಿ), ಮೊಹ್ಮದ್ ಸಲೀಂ(ಸಿಪಿಎಂ), ರಾಮಗೋಪಾಲ್ ಯಾದವ್(ಸಮಾಜವಾದಿ ಪಕ್ಷ), ದೇವೇಂದ್ರ ಪ್ರಸಾದ್ ಯಾದವ್(ಆರ್ ಜೆಡಿ), ರಾಜೇಶ್ ವರ್ಮಾ(ಬಿಎಸ್ ಪಿ), ಸಿ.ಕುಪ್ಪುಸ್ವಾಮಿ(ಡಿಎಂಕೆ) ಇನ್ನಿತರ ಸದಸ್ಯರಾಗಿದ್ದಾರೆ.
ಕಳೆದ ಜು. 22ರಂದು ಕೇಂದ್ರ ಯುಪಿಎ ಸರ್ಕಾರ ವಿಶ್ವಾಸಮತ ಪ್ರದರ್ಶನ ಮಾಡಬೇಕಿದ್ದ ಸಂದರ್ಭದಲ್ಲಿ ಬಿಜೆಪಿ ಯ ಮೂವರು ಸಂಸದರಾದ ಅಶೋಕ ಅರ್ಗಲ್, ಮಹಾವೀರ ಬೋಗಾರ್ ಮತ್ತು ಫಗ್ಗಾನ್ ಸಿಂಗ್ ಕುಲಾಸ್ತೆ ಅವರಿಗೆ ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ಹಣದ ಆಮಿಷ ನೀಡಿದ್ದರು. ವಿಶ್ವಾಸಮತದಿಂದ ದೂರ ಉಳಿದಲ್ಲಿ ತಲಾ ಮೂರು ಕೋಟಿ ರು.ಗಳನ್ನು ನೀಡುವುದಾಗಿ ಹೇಳಿದ್ದರು. ಮುಂಗಡವಾಗಿ ತಲಾ ಒಂದೊಂದು ಕೋಟಿ ರುಗಳನ್ನು ಸಂಸದರಿಗೆ ನೀಡಿದ್ದರು ಎಂದು ವಿಶ್ವಾಸಮತದ ದಿನ ಬಿಜೆಪಿ ಸಂಸರು ಸಂಸತ್ತಿನಲ್ಲಿ ಭಾರಿ ಗದ್ದಲವನ್ನು ಮಾಡಿದ್ದರು. ಪ್ರಕರಣವನ್ನು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ತೀವ್ರವಾಗಿ ಖಂಡಿಸಿದ್ದರು. ಇದೊಂದು ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಎಂದು ಕಿಡಿಕಾರಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭಾಧ್ಯಕ್ಷ ಸೋಮನಾಠ್ ಚಟರ್ಜಿ ಏಳು ಸಂಸದರ ಸಮಿತಿಯನ್ನು ರಚಿಸಿ ಸತ್ಯಾಸತ್ಯತೆಯನ್ನು ಬಯಲುಗೊಳಿಸಲು ಸೂಚಿಸಿದ್ದರು. ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ಪ್ರಕರಣವನ್ನು ಸಂಪೂರ್ಣವಾಗಿ ನಿರಾಕರಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)