ಜೀವಂತ ಬಾಂಬ್ನೊಂದಿಗೆ ಎರಡು ದಿನ ಕಳೆದ ಭೂಪ
ಬೆಂಗಳೂರು, ಜು. 27 : ''ಶನಿವಾರ ಫೋರಂ ಮಾಲ್ ಬಳಿ ನಿಷ್ಕ್ರಿಯಗೊಳಿಸಿದ ಜೀವಂತ ಬಾಂಬ್ ಕಳೆದ ಎರಡು ದಿನಗಳಿಂದ ಅಲ್ಲಿಯೇ ಇತ್ತು. ಅದರ ಮೇಲೆ ನನ್ನ ಕಿರಿಯ ಮಗ ಕುಳಿತಿದ್ದ. ಅದನ್ನು ತುಳಿಸಿ ಗಿಡ ಎಂದುಕೊಂಡಿದ್ದೆ. ಬೆಳಗ್ಗೆ ವೈರ್ ಮತ್ತು ಪೇಪರ್ ಅಂಟಿಸಿದ್ದನ್ನು ನೋಡಿದಾಗಲೇ ಇದು ಬಾಂಬ್ ಇರಬಹುದು ಎಂದು ಸಂಶಯ ಬಂದು ಅದು ಎಲ್ಲಿ ಇತ್ತೂ ಅಲ್ಲಿಯೇ ಇಡಲು ನಿರ್ಧರಿಸಿದೆ '' ಎನ್ನುತ್ತಾರೆ ಫೋರಂನ ಹೈದರಾಬಾದ್ ಹೌಸ್ ಎದುರು ಚಪ್ಪಲಿ ರಿಪೇರಿ ಮಾಡುವ ಸರವಣ ಮತ್ತು ಆತನ ಪತ್ನಿ ಸರಿತಾ.
ತನ್ನ ಮೂವರು ಮಕ್ಕಳೊಂದಿಗೆ ಬಾಂಬ್ ಜತೆಯಲ್ಲಿ ಎರಡು ದಿನ ಕಳೆದಿದ್ದನ್ನು ಮಾಧ್ಯಮಗಳ ಎದುರು ಆ ದಂಪತಿಗಳು ವಿವರಿಸಿದರು. ಗುರುವಾರ ಸಂಜೆ ಎಂದಿನಂತೆ ನೀರು ತರಲೆಂದು ಸಮೀಪದ ಮನೆಯೊಂದಕ್ಕೆ ತೆರಳಿದ ಸರಿತಾ ಅಂದವಾಗಿ ಕಾಣುತ್ತಿದ್ದ ಚಿಕ್ಕದಾದ ಹೂವಿನ ಕುಂಡವನ್ನು ತಂದಳು. ಅಂಗಡಿಯ ಮುಂದೆ ಇಡುವ ಉದ್ದೇಶ ಆಕೆಗಿತ್ತು. ಹೂಕುಂಡವನ್ನು ನಾಲ್ಕು ಸಿಮೆಂಟ್ ಬ್ಲಾಕ್ ಗಳ ಮೇಲೆ ಇಟ್ಟೆ ಅದರ ಬುಡದಲ್ಲಿ ಸಣ್ಣ ತಂತಿ ಇದ್ದುದರಿಂದ ಅದು ಸರಿಯಾಗಿ ಕೂರುತ್ತಿರಲಿಲ್ಲ. ಏನಿರಬಹುದೆಂದು ನೋಡಿದಾಗ ತಳದಲ್ಲಿ ವೈರ್ ಕಂಡಿತು. ಕೂಡಲೇ ಚಪ್ಪಲಿ ಕತ್ತರಿಸುವ ಚಾಕುವಿನಿಂದ ಅದನ್ನು ಕತ್ತರಿಸಿದೆ. ಆನಂತರ ಕುಂಡ ಸರಿಯಾಗಿ ಕುಳಿತುಕೊಂಡಿತು. ಶನಿವಾರ ಬೆಳಗ್ಗೆ ಪತ್ರಿಕೆಯನ್ನು ಓದಿದೆ. ಇದು ಬಾಂಬ್ ಇರಬಹುದು ಎಂದು ಶಂಕೆ ಮೂಡಿತು. ಕೂಡಲೇ ಅದು ಎಲ್ಲಿತ್ತೂ ಅಲ್ಲಿ ಇಟ್ಟು ಬಾ ಎಂದು ಹೇಳಿದೆ. ಕೂಡಲೇ ಆಕೆ ಅದನ್ನು ಮೊದಲಿದ್ದ ಸ್ಥಳದಲ್ಲಿ ಇಟ್ಟು ಬಂದಳು. ನಂತರ ಪಕ್ಕದ ಚಹಾ ಅಂಗಡಿಯ ರಾಜಮಣಿಗೆ ಪೊಲೀಸರಿಗೆ ತಿಳಿಸಿದರು.
ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಶ್ವಾನದಳ, ಬಾಂಬ್ ನಿಷ್ಕ್ರಿಯದಳ ಈ ಪ್ರದೇಶವನ್ನು ಸುತ್ತುವರೆದವು. ಅದು ಸಿಡಿದಿದ್ದರೆ ನನ್ನು ಕುಟುಂಬ ಇಂದು ಇರುತ್ತಿರಲಿಲ್ಲ ಎಂದು ಸರವಣ ಅಪಾಯದಿಂದ ಪಾರದ ಬಗೆಯನ್ನ್ನು ವಿವರಿಸುತ್ತಿದ್ದರೆ ಅವರ ಕಣ್ಣಲ್ಲಿ ಏನೋ ದುಗುಡ ಕಾಡುತ್ತಿತ್ತು. ರಾಜಮಣಿಯನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕತೊಡಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)