ಉಗ್ರರು ಇ-ಮೇಲ್ ರವಾನಿಸಿದ್ದ ಕೇಂದ್ರ ಪತ್ತೆ
ಅಹಮದಾಬಾದ್, ಜು. 27 : ನಗರದಲ್ಲಿ ಶನಿವಾರ ಸಂಜೆ ನಡೆದ ಭೀಕರ ಸರಣಿ ಬಾಂಬ್ ಸ್ಫೋಟದಲ್ಲಿ 38 ಹತ್ಯೆ ಹಾಗೂ ನೂರಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿರುವ ಘಟನೆಗೆ ಸಂಬಂಧಿಸಿದಂತೆ ಅಹಮದಾಬಾದ್ ಅಪರಾಧಿ ನಿಗ್ರಹ ದಳ 30 ಶಂಕಿತ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ. ಹಾಗೆಯೇ ಸ್ಫೋಟಕ್ಕೆ ಸಂಬಂಧಿಸಿದಂತೆ ಪ್ರಮುಖ ಮಾಧ್ಯಮಗಳಿಗೆ ಈ-ಮೇಲ್ ಮೂಲಕ ಸುದ್ದಿಯನ್ನು ನವಿ ಮುಂಬೈನ ಸೈಬರ್ ಕೇಂದ್ರದ ಮೂಲಕ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೈಬರ್ ಕೇಂದ್ರದ ಮಾಲೀಕ ಅಭಿಷೇಕ್ ಶರ್ಮಾನನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಸೈಬರ್ ಕೇಂದ್ರಕ್ಕೆ ಸಂಬಂಧಿಸಿದ ಎಲ್ಲ ಕಂಪ್ಯೂಟರ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರದ ಗೃಹ ಸಚಿವ ಶಿವರಾಜ್ ಪಾಟೀಲ್, ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿದೆ. ಕಳೆದ ವರ್ಷ ಜೈಪುರದಲ್ಲಿ ನಡೆದ ಕೃತ್ಯವನ್ನು ಸಹ ಇದೇ ಸಂಘಟನೆ ಮಾಡಿದೆ. ಈ ಮೇಲ್ ಮೂಲಕ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿತ್ತು ಎಂದು ಅವರು ತಿಳಿಸಿದ್ದಾರೆ.
ಸ್ಫೋಟದ ಹಿನ್ನಲೆಯಲ್ಲಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಗುಜರಾತ್ಗೆ ಅಗತ್ಯವಾದ ರಕ್ಷಣಾಸಿಬ್ಬಂದಿಯನ್ನು ಕೇಂದ್ರ ರವಾನಿಸಲಾಗಿದೆ. ಸಿಆರ್ ಪಿಎಫ್, ಎನ್ಎಸ್ ಜಿ ಮತ್ತು ಆರ್ ಎಎಫ್ ಪಡೆಯನ್ನು ಘಟನಾ ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಮುಖ್ಯಮಂತ್ರಿ ನರೇಂದ್ರ ಮೋದಿ ಕ್ಷೇತ್ರ ಮಣಿನಗರ ಸೇರಿದಂತೆ ಒಟ್ಟು 17 ಕಡೆಗಳಲ್ಲಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ವಿಧ್ವಂಸಕ ಕೃತ್ಯವನ್ನು ಎಸಗಿತ್ತು. ಸಾವಿನ ಸಂಖ್ಯೆ ಏರುತ್ತಿದ್ದು ಇದುವರೆಗೆ 39 ಮಂದಿ ಮೃತಪಟ್ಟಿದ್ದು ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
(ಏನೆನ್ಸೀಸ್)