ತೃತೀಯ ರಂಗದ ಚುಕ್ಕಾಣಿ ಮಾಯಾವತಿಗೆ: ಜೆಡಿಎಸ್
ನವದೆಹಲಿ, ಜು.23: ಯುಎನ್ಪಿಎ ಹಾಗೂ ಎಡಪಕ್ಷದ ನಾಯಕರು ಬುಧವಾರ ಬಿಎಸ್ಪಿ ನಾಯಕಿ ಮಾಯಾವತಿಯನ್ನು ಭೇಟಿ ಮಾಡಿ ತೃತೀಯ ರಂಗ ರಚಿಸಲು ಮಾತುಕತೆ ನಡೆಸಿದರು.
ಎಡಪಕ್ಷದ ಹಿರಿಯ ನಾಯಕರಾದ ಪ್ರಕಾಶ್ ಕಾರಟ್, ಡಿ.ರಾಜಾ, ಎ.ಬಿ.ಬರ್ಧನ್ ಹಾಗೂ ಅಬನಿ ರಾಯ್, ಜೆಡಿಎಸ್ನ ನಾಯಕರಾದ ಎಚ್.ಡಿ.ದೇವೇಗೌಡ ಮತ್ತವರ ಪುತ್ರ ಎಚ್.ಡಿ.ಕುಮಾರಸ್ವಾಮಿ, ತೆಲುಗು ದೇಶಂ ಪಕ್ಷದ ಚಂದ್ರಬಾಬು ನಾಯ್ಡು, ರಾಷ್ಟ್ರೀಯ ಲೋಕದಳ ಮುಖ್ಯಸ್ಥರಾದ ಅಜಿತ್ ಸಿಂಗ್ ಮತ್ತು ಝಾರ್ಖಂಡ್ ವಿಕಾಸ್ ಮೋರ್ಚಾದ ಮುಖ್ಯಸ್ಥ ಬಾಬುಲಾಲ್ ಮರಾಂಡಿ ಮುಂತಾದವರು ಮಾಯಾವತಿಯನ್ನು ಭೇಟಿ ಮಾಡಿದವರಲ್ಲಿ ಪ್ರಮುಖರು.
ಮುಂದಿನ ಚುನಾವಣೆಗೆ ತೃತೀಯ ರಂಗದ ನೇತೃತ್ವವನ್ನು ಮಾಯಾವತಿ ವಹಿಸಲಿ ಎಂದು ಕುಮಾರಸ್ವಾಮಿ ಬಹಿರಂಗವಾಗಿ ಪ್ರಕಟಿಸಿದರು. ಮುಂದಿನ ದಿನಗಳಲ್ಲಿ ತೃತೀಯ ರಂಗವನ್ನು ಮುನ್ನಡೆಸುವ ಶಕ್ತಿ ಮಾಯಾವತಿ ಅವರಿಗಿದೆ. ಭವಿಷ್ಯದ ರಾಜಕೀಯದಲ್ಲಿ ನಮ್ಮ ಪಕ್ಷ ಮಾಯಾವತಿ ಮೇಡಂ ಪರವಾಗಿ ನಿಲ್ಲಲಿದ್ದು ತೃತೀಯ ರಂಗವನ್ನು ಬಲಪಡಿಸಲಿದೆ. ಮಾಯಾವತಿ ಅವರು ಖಂಡಿತ ದೇಶ ಹಾಗೂ ತೃತೀಯ ರಂಗವನ್ನು ಮುನ್ನಡೆಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಕುಮಾರಸ್ವಾಮಿ ಆಶಾಭಾವ ವ್ಯಕ್ತಪಡಿಸಿದರು.
ಯುಪಿಎ ವಿರುದ್ಧ ಇದುವರೆಗೂ ಯಾವುದೆ ರಾಜಕೀಯ ರಂಗ ರಚನೆಯಾಗಲಿಲ್ಲ. ಯುಎನ್ಪಿಎ, ಬಿಎಸ್ಪಿ, ಜೆಡಿಎಸ್, ಟಿಡಿಪಿ, ಆರ್ಎಲ್ಡಿ ಹಾಗೂ ಎಡಪಕ್ಷಗಳು ರಾಷ್ಟ್ರದ ಹಿತದೃಷ್ಟಿಯಿಂದ ಒಂದಾಗಿ ತೃತೀಯ ರಂಗವನ್ನು ರಚಿಸಿ ಯುಪಿಎಯನ್ನು ಮಣಿಸಲಿವೆ ಎಂದು ಸಿಪಿಐನ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ತಿಳಿಸಿದರು. ವಿಶ್ವಾಸಮತದಲ್ಲಿ ಯುಪಿಎ ಗೆಲುವು ಪೂರ್ವ ನಿಶ್ಚಿಯವಾಗಿತ್ತು ಹಾಗಾಗಿ ಯುಪಿಎ ಮತ್ತು ಎನ್ಡಿಎಗೆ ಪರ್ಯಾಯವಾಗಿ ತೃತೀಯ ರಂಗ ಆವಿರ್ಭವಿಸಲಿದೆ ಎಂದರು.
ಕುದುರೆ ವ್ಯಾಪಾರ ಹಾಗೂ ಬೆದರಿಕೆ ಒಡ್ಡಿ ಯುಪಿಎ ವಿಶ್ವಾಸಮತದಲ್ಲಿ ಗೆದ್ದಿದೆ. ಈ ಸಂಬಂಧ ಶೀಘ್ರದಲ್ಲೇ ರಾಷ್ಟ್ರವ್ಯಾಪ್ತಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಟಿಡಿಪಿಯ ಚಂದ್ರಬಾಬು ನಾಯ್ಡು ತಿಳಿಸಿದರು. ಯುಪಿಎ ಗೆಲುವಿನಿಂದ ಪ್ರಜಾಪ್ರಭುತ್ವಕ್ಕೆ ತುಂಬಲಾದ ನಷ್ಟವಾಗಿದೆ ಎಂದು ಮಾಯಾವತಿ ಪ್ರತಿಕ್ರಿಯಿಸಿದರು.
(ಏಜೆನ್ಸೀಸ್)