ಅಡ್ಡಮತ ಹಾಕಿ ಅಮಾನತ್ತಾದ ಬಿಜೆಪಿ ಸಂಸದರು
ನವದೆಹಲಿ, ಜು. 23 : ಮಂಗಳವಾರ ಸಂಸತ್ತಿನಲ್ಲಿ ನಡೆದ ವಿಶ್ವಾಸಮತದಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಯುಪಿಎ ಸರ್ಕಾರದ ಗೆಲುವಿಗೆ ಪ್ರಮುಖ ಕಾರಣರಾದ ಎಂಟು ಮಂದಿ ಸಂಸದರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಿದೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ನಮ್ಮ ಸಂಸದರು ಅಡ್ಡಮತ ಚಲಾಯಿಸದಿದ್ದಲ್ಲಿ ಯುಪಿಎ ಸರ್ಕಾರ ಸೋಲನುಭವಿಸಬೇಕಾಗಿತ್ತು ಎಂದು ಹೇಳಿದರು. ವಿಶ್ವಾಸಮತದಲ್ಲಿ ಗೆಲುವು ಸಾಧಿಸಿದರೆ ಸಾಲದು, ರಾಷ್ಟ್ರವನ್ನು ಅನೇಕ ಸಮಸ್ಯೆಗಳು ಕಾಡುತ್ತಿವೆ. ಮುಖ್ಯವಾಗಿ ಹಣದುಬ್ಬರ ನಿಯಂತ್ರಿಸಲಿ ಎಂದು ಸವಾಲು ಹಾಕಿದರು. ಯುಪಿಎ ಸರ್ಕಾರದ ಜನ ವಿರೋಧಿ ಆಡಳಿತ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಅಡ್ಡಮತ ನೀಡಿ ಯುಪಿಎ ಗೆಲುವಿಗೆ ಸಹಕರಿಸಿದ ಸಂಸರ ವಿರುದ್ಧ ಪಕ್ಷದ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಆಕ್ರೋಶ ವ್ಯಕ್ತಪಡಿಸಿದರು. ಮಂಗಳವಾರ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮಾಡಿರುವ ಆರೋಪಕ್ಕೆ ಸೂಕ್ತ ಸಮಯದಲ್ಲಿ ಉತ್ತರ ಕೊಡುವೆ ಎಂದು ಹೇಳಿದರು. ಇದು ನನ್ನ ರಾಜಕೀಯ ಜೀವನದ ಅತ್ಯಂತ ಕಷ್ಟ ಸಮಯ ಎಂದ ಆಡ್ವಾಣಿ, ನಿನ್ನೆಯ ಗೆಲುವಿನಲ್ಲಿ ನಮ್ಮ ಸಂಸದರ ಪಾತ್ರವಿದೆ ಎನ್ನುವುದನ್ನು ಮರೆಯಬಾರದು. ನೋಟಿನ ಮೂಲಕ ಸಂಸದರನ್ನು ಖರೀದಿ ಮಾಡಿರುವ ಕಾಂಗ್ರೆಸ್ ಕ್ರಮ ಸಂವಿಧಾನ ವಿರೋಧಿ ಎಂದು ಟೀಕಿಸಿದರು.
ಮುಂದಿನ ಚುನಾವಣೆಯಲ್ಲಿ ಸಂಸದರ ಖರೀದಿ ವಿಷಯ, ಹಣದುಬ್ಬರ ಪ್ರಮುಖ ವಿಷಯಗಳು ಎಂದ ಆಡ್ವಾಣಿ, ಇದನ್ನೇ ಇಟ್ಟುಕೊಂಡು ರಾಷ್ಟ್ರದ ತುಂಬಾ ಜನಾಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ. ಕಾಂಗ್ರೆಸ್ ನ ಕೆಟ್ಟ ಆಡಳಿತವನ್ನು ಜನರಿಗೆ ವಿವರಿಸುತ್ತೇವೆ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ವಿಶ್ವಾಸ
ಮತ
:
ಯುಪಿಎಗೆ
ನಿಚ್ಚಳ
ಗೆಲುವು
ವಿಪ್
ಉಲ್ಲಂಘನೆ;
ಬಿಜೆಪಿ
ಸಂಸದರ
ವಿರುದ್ಧ
ಕ್ರಮ?