ಬೆಂಗಳೂರು ರೇಸ್ ಕೋರ್ಸ್ ಸ್ಥಳಾಂತರಕ್ಕೆ ನಿರ್ಧಾರ
ಬೆಂಗಳೂರು, ಜು. 23 : ಬೆಂಗಳೂರಿನ ಹೃದಯ ಭಾಗದಲ್ಲಿರುವ ರೇಸ್ ಕೋರ್ಸ್ ಅನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಲು ಸೂಕ್ತ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಪ್ರಶ್ನೆಯೊಂದಕ್ಕೆ ಮಂಗಳವಾರ ವಿಧಾನಸಭೆಯಲ್ಲಿ ಉತ್ತರಿಸಿದರು.
ಆರ್.ರೋಷನ್ ಬೇಗ್ (ಕಾಂಗ್ರೆಸ್) ಪ್ರಶ್ನೆಗೆ ಉತ್ತರಿಸಿದ ಉದಾಸಿ, ಈಗಿರುವ ರೇಸ್ಕೋರ್ಸ್ ಪ್ರದೇಶದಲ್ಲಿ ನೆಲಮಾಳಿಗೆ ಪಾರ್ಕಿಂಗ್ ಸೌಲಭ್ಯಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದರು. ಬೇಗ್ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವರು, ಕೇಂದ್ರ ಕಾರಾಗೃಹ ಸ್ಥಳಾಂತರದ ಬಳಿಕ ಆ ಜಾಗದಲ್ಲಿ ಫ್ರೀಡಂ ಪಾರ್ಕ್ ನಿರ್ಮಿಸಲಾಗುತ್ತಿದೆ. ಅದು 100 ಕೋಟಿ ರು.ಗಳಿಗೂ ದೊಡ್ಡ ಯೋಜನೆ. ಆದರೆ ಪಾರ್ಕ್ ನಿರ್ಮಾಣಕ್ಕೆ 10.27 ಕೋಟಿ ರು.ಗಳ ಎರಡು ಹಂತದ ಯೋಜನೆ ಸಿದ್ಧಪಡಿಸಲಾಗಿದೆ. ಎಂಟೂವರೆ ಕೋಟಿ ರು.ಗಳ ಮೊದಲ ಹಂತದ ಕಾಮಗಾರಿ ಶೇ.90 ರಷ್ಟು ಪೂರ್ಣಗೊಂಡಿದ್ದು, ಅಕ್ಟೋಬರ್ ವೇಳೆಗೆ ಉದ್ಘಾಟನೆಗೆ ಸಿದ್ಧವಾಗಲಿದೆ ಎಂದರು.
ಎರಡನೇ ಹಂತದ ಕಾಮಗಾರಿಯನ್ನು ಬೇಗನೆ ಆರಂಭಿಸಿ ಪೂರ್ಣಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ಪಾರ್ಕಿಂಗ್ ಸೌಲಭ್ಯ ಸೇರಿದಂತೆ ಮೂಲ ಯೋಜನೆಯಂತೆ ವಿಸ್ತೃತ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರ ಹೆಸರನ್ನು ಪಾರ್ಕ್ ಗೆ ಇಡುವಂತೆ ಶಾಸಕರಾದ ರೋಷನ್ ಬೇಗ್ ಮತ್ತು ದಿನೇಶ್ ಗುಂಡೂರಾವ್ ಸರ್ಕಾರವನ್ನು ಆಗ್ರಹಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)