ಸರ್ಕಾರಕ್ಕೆ ಗೆಲುವು ಖಚಿತ: ಪ್ರಧಾನಿ ವಿಶ್ವಾಸ
ನವದೆಹಲಿ, ಜು. 21 : ಮಂಗಳವಾರ ನಡೆಯಲಿರುವ ವಿಶ್ವಾಸಮತದ ಅಗ್ನಿಪರೀಕ್ಷೆಯಲ್ಲಿ ಯುಪಿಎ ಸರ್ಕಾರ ಗೆಲುವು ಸಾಧಿಸಲಿದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಇಂದು ಲೋಕಸಭೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಸಂಸತ್ತಿಗೆ ಆಗಮಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ವಿಶ್ವಾಸಮತ ಯುಪಿಎ ಪರವಾಗಿರಲಿದೆ ಎಂದರು. ಅಧಿವೇಶನಕ್ಕೂ ಮೊದಲು ಉಪಾಹಾರಕ್ಕೆ ಯುಪಿಎ ಮಿತ್ರ ಪಕ್ಷಗಳನ್ನು ಆಹ್ವಾನಿಸಿದ್ದ ಪ್ರಧಾನ ಮಂತ್ರಿ ಎಲ್ಲಾ ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಜೆಎಂಎಂ ನಾಯಕ ಶಿಬು ಸೋರೆನ್ ಹಾಗೂ ಅವರ ಸಂಸದರು ಪ್ರಧಾನಮಂತ್ರಿಯನ್ನು ಭೇಟಿ ಮಾಡಿ ಚರ್ಚಿಸಿದರು.
ಡಿಎಂಕೆ ಉಚ್ಛಾಟಿತ ಸಂಸದ ದಯಾನಿಧಿ ಮಾರನ್ ಮತ್ತು ಆಲ್ ಇಂಡಿಯಾ ಮಜ್ಲೀಸ್ ಪಾರ್ಟಿಯ ಸಂಸದ ಅಸಾಜುದ್ದೀನ್ ಓವಾಸಿ ಅವರು ಯುಪಿಎಗೆ ಮತ ನೀಡಲಿದ್ದಾರೆ. ಇದು 6 ಸರ್ಕಾರಗಳ 11 ನೇ ವಿಶ್ವಾಸಮತ ಪ್ರದರ್ಶನವಾಗಿದೆ. 1999 ರಲ್ಲಿ ಎಐಡಿಎಂಕೆ ಪಕ್ಷದ ನಾಯಕಿ ಜಯಲಲಿತಾ ಬೆಂಬಲ ವಾಪಸ್ಸು ತೆಗೆದುಕೊಂಡ ಹಿನ್ನಲೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಕೇವಲ ಒಂದು ಮತದ ಅಂತರದಲ್ಲಿ ಸೋಲುನುಭವಿಸಿತ್ತು.
(ಏಜೆನ್ಸೀಸ್)