ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ!
ಬೆಂಗಳೂರು, ಜು.19: ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯಸಭಾ ಸದಸ್ಯ ಎಸ್.ಎಂ.ಕೃಷ್ಣ ರಾಜ್ಯ ರಾಜಕೀಯಕ್ಕೆ ಶನಿವಾರ ವಿದ್ಯ್ಯುಕ್ತವಾಗಿ ವಿದಾಯ ಹೇಳಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ ಎಲ್ಲ ಸ್ಥಾನಗಳನ್ನು ಕಂಡಿದ್ದು ಇನ್ನು ರಾಜ್ಯ ರಾಜಕೀಯಕ್ಕೆ ಹಿಂದಿರುವುದಿಲ್ಲ ಎಂದು ಪ್ರಕಟಿಸಿದ್ದಾರೆ.
ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ, ಪ್ರದೇಶ ಕಾಂಗ್ರೆಸ್ ನಾಯಕ, ವಿಧಾನಸಭಾಧ್ಯಕ್ಷ, ಶಾಸಕನಾಗಿ ಕೆಲಸ ಮಾಡಿದ ತೃಪ್ತಿ ನನಗಿದೆ. ಹಾಗಾಗಿ ರಾಜ್ಯ ರಾಜ್ಯಕಾರಣಕ್ಕೆ ವಿದಾಯ ಹೇಳುತ್ತಿದ್ದೇನೆ ಎಂದರು. ಕೃಷ್ಣ ಅವರ ರಾಜಕೀಯ ನಡೆ ಏನಿದ್ದರೂ ಇನ್ನು ದೆಹಲಿ ಕಡೆ ಎಂಬುದು ಅವರ ಮಾತುಗಳಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತಿತ್ತು.
ನಂತರ ಅವರ ಮಾತು ಯಡಿಯೂರಪ್ಪ ಮಂಡಿಸಿದ ಬಜೆಟ್ ಕಡೆಗೆ ತಿರುಗಿತು. ದೂರದೃಷ್ಟಿ ಇಲ್ಲದ, ಪ್ರಗತಿಯ ನೆಲೆಗಟ್ಟಿಲ್ಲದ ಬಜೆಟ್ ಎಂದು ಟೀಕಿಸಿದರು. ಕರೆಂಟೇ ಇಲ್ಲ ಇನ್ನು ಉಚಿತ ವಿದ್ಯುತ್ ಎಲ್ಲಿಂದ ತರುತ್ತಾರೆ ಎಂದು ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಪ್ರಕಟಿಸಿರುವುದನ್ನು ವ್ಯಂಗ್ಯವಾಡಿದರು. ಬಜೆಟ್ನಲ್ಲಿ ಹೊಸ ಯೋಜನೆಗಳಿಲ್ಲ ಪ್ರಗತಿಯ ನೋಟವಿಲ್ಲ. ಈ ಬಜೆಟ್ ರಾಜ್ಯಕ್ಕೆ ಮಾರಕವಾಗಲಿದೆ ಎಂದು ತಮ್ಮ ಸ್ವಚ್ಛಂದ ಅಭಿಪ್ರಾಯವನ್ನು ಮುಕ್ತವಾಗಿ ತೇಲಿಬಿಟ್ಟರು.
(ದಟ್ಸ್ಕನ್ನಡ ವಾರ್ತೆ)